

ಬೆಂಗಳೂರು: ಬೆಂಗಳೂರಿನಾದ್ಯಂತ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 20 ರವರೆಗೆ (ಐದು ದಿನಗಳು) ಹಂತ ಹಂತವಾಗಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಎಲ್ಲೆಲ್ಲಿ, ಯಾವಾಗ ಮದ್ಯ ಮಾರಾಟ ನಿಷೇಧ ?
ಸೆಪ್ಟೆಂಬರ್ 16 (ಬೆಳಗ್ಗೆ 10:00 ರಿಂದ ಸೆ. 17 ರ ಮಧ್ಯಾಹ್ನ 1:00 ರವರೆಗೆ):
ಆರ್.ಟಿ.ನಗರ, ಜೆ.ಸಿ.ನಗರ, ಹೆಬ್ಬಾಳ, ಸಂಜಯನಗರ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ.
ಸೆಪ್ಟೆಂಬರ್ 18 (ಬೆಳಗ್ಗೆ 10:00 ರಿಂದ ರಾತ್ರಿ 11:59 ರವರೆಗೆ):
ಸಂಪಿಗೆಹಳ್ಳಿ, ಅಮೃತಹಳ್ಳಿ, ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಗೋವಿಂದಪುರ, ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ, ಪುಲಕೇಶಿನಗರ, ಭಾರತಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಇಂದಿರಾನಗರ ಮತ್ತು ಹಲಸೂರು ವ್ಯಾಪ್ತಿ.
ಸೆಪ್ಟೆಂಬರ್ 19 (ಬೆಳಗ್ಗೆ 10:00 ರಿಂದ ಸೆ. 20 ರ ಮುಂಜಾನೆ 1:00 ರವರೆಗೆ):
ಆರ್.ಟಿ.ನಗರ, ಜೆ.ಸಿ.ನಗರ, ಹೆಬ್ಬಾಳ, ಸಂಜಯನಗರ, ಡಿ.ಜೆ.ಹಳ್ಳಿ, ಭಾರತಿನಗರ ಮತ್ತು ಪುಲಕೇಶಿನಗರ ಠಾಣಾ ವ್ಯಾಪ್ತಿ.
ಸೆಪ್ಟೆಂಬರ್ 20 (ಬೆಳಗ್ಗೆ 10:00 ರಿಂದ ರಾತ್ರಿ 11:59 ರವರೆಗೆ):
ಪುಲಕೇಶಿನಗರ, ಭಾರತಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಮತ್ತು ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿ.
ವಿಶೇಷ ವಲಯ: ಯಲಹಂಕ ಉಪನಗರ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಭ್ರಮ್ ಕಾಲೇಜು ರಸ್ತೆಯಿಂದ ಎಂ.ಎಸ್ ಪಾಳ್ಯ, ಜಲ್ಲಿಮೀಷನ್ ಸರ್ಕಲ್, ಚಿಕ್ಕಬೆಟ್ಟಿಹಳ್ಳಿ, ದೊಡ್ಡಬೆಟ್ಟಿಹಳ್ಳಿ, ಅಟ್ಕೂರು ಮುಖ್ಯರಸ್ತೆ ಹಾಗೂ ಇವುಗಳ ಸುತ್ತಮುತ್ತಲಿನ ಪ್ರದೇಶಗಳು (ಬೆಳಗ್ಗೆ 6:00 ರಿಂದ ರಾತ್ರಿ 11:59 ರವರೆಗೆ)
ಹಾಗಾದ್ರೆ, ಯಾರಿಗೆ ವಿನಾಯಿತಿ ಮತ್ತು ನಿರ್ಬಂಧಗಳು?
ಯಾರಿಗೆ ವಿನಾಯಿತಿ?: 5 ಸ್ಟಾರ್ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ ಕ್ಲಬ್ಗಳಿಗೆ ಈ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ಉಳಿದಂತೆ ಸಾಮಾನ್ಯ ವೈನ್ ಶಾಪ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳು ಹಾಗೂ ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದ್ ಇರಲಿದೆ. ಆದರೆ ಹೋಟೆಲ್ಗಳಲ್ಲಿ ಆಹಾರ ಸರಬರಾಜು ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.
ಮುಂದುವರೆದು, ಗಣೇಶೋತ್ಸವ ಹಾಗೂ ಮೂರ್ತಿ ವಿಸರ್ಜನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಪ್ರಮುಖ ಜಿಲ್ಲೆಗಳಲ್ಲೂ ಮದ್ಯ ಮಾರಾಟ ನಿಷೇಧಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅವುಗಳು,
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ:
ಸೆಪ್ಟೆಂಬರ್ 16 ರ ಬೆಳಗ್ಗೆ 6:00 ಗಂಟೆಯಿಂದ ಸೆಪ್ಟೆಂಬರ್ 17 ರ ಬೆಳಗ್ಗೆ 6:00 ಗಂಟೆಯವರೆಗೆ.
ಸೆಪ್ಟೆಂಬರ್ 18 ರ ಬೆಳಗ್ಗೆ 6:00 ಗಂಟೆಯಿಂದ ಸೆಪ್ಟೆಂಬರ್ 19 ರ ಬೆಳಗ್ಗೆ 6:00 ಗಂಟೆಯವರೆಗೆ.
ಉಡುಪಿ ಜಿಲ್ಲೆ:
ಸೆಪ್ಟೆಂಬರ್ 16 (ಇಂದು): ಉಡುಪಿ ನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನ 2:00 ಗಂಟೆಯಿಂದ ಮಧ್ಯರಾತ್ರಿ 12:00 ರವರೆಗೆ ಮದ್ಯ ಮಾರಾಟ ಇರುವುದಿಲ್ಲ.
ಸೆಪ್ಟೆಂಬರ್ 18: ಗಣೇಶ ಮೂರ್ತಿ ವಿಸರ್ಜನೆ ನಿಗದಿಯಾಗಿರುವ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಗಂಗೊಳ್ಳಿ, ಕುಂದಾಪುರ ಟೌನ್ ಮತ್ತು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ಮಧ್ಯಾಹ್ನ 2:00 ರಿಂದ ಮಧ್ಯರಾತ್ರಿ 12:00 ರವರೆಗೆ ನಿಷೇಧ ಇರಲಿದೆ.
ಹುಬ್ಬಳ್ಳಿ-ಧಾರವಾಡ:
ಅತಿ ದೊಡ್ಡ ಮಟ್ಟದಲ್ಲಿ ಗಣೇಶೋತ್ಸವ ಆಚರಿಸಲಾಗುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೂ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮೆರವಣಿಗೆಗಳ ಭದ್ರತೆಗಾಗಿ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 26 ರ ನಡುವೆ ಒಟ್ಟು 5 ಹಂತಗಳಲ್ಲಿ ಮದ್ಯ ಮಾರಾಟ, ಸಾಗಣೆ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.