

ಬೆಂಗಳೂರು: ಬೆಂಗಳೂರಿನ ಕೋರಮಂಗಲದ ಕೇಂದ್ರ ಸರ್ಕಾರಿ ಕಚೇರಿಗಳ ಸಂಕೀರ್ಣ ಕೆಂದ್ರೀಯ ಸದನದಲ್ಲಿ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಕೇಂದ್ರ ಜಿಎಸ್ಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹಾಗೂ ಖಾಸಗಿ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತ ಸರ್ಕಾರಿ ಅಧಿಕಾರಿಯನ್ನು ದಕ್ಷಿಣ ವಿಭಾಗ-4, ಎ-ರೇಂಜ್, ದಕ್ಷಿಣ ಕಮಿಷನರೇಟ್ನ ಕೇಂದ್ರ ಜಿಎಸ್ಟಿ ಅಧೀಕ್ಷಕ ಮೋಹಿತ್ ಎಂದು ಗುರುತಿಸಲಾಗಿದೆ. ಅಧಿಕಾರಿಗೂ ದೂರುದಾರನಿಗೂ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವ್ಯಕ್ತಿ ಸಲ್ಮಾನ್ನನ್ನೂ ಬಂಧಿಸಲಾಗಿದೆ.
ಕೇಂದ್ರ ಜಿಎಸ್ಟಿ ಬಾಕಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಜಮೀರ್ ಎಂಬುವರು ಆರೋಪಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಬಿಟ್ಟು ಕಡತವನ್ನು ಮುಕ್ತಾಯಗೊಳಿಸಲು ಅಧೀಕ್ಷಕರು ಸಲ್ಮಾನ್ ಜೊತೆಗೂಡಿ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚ ನೀಡಲು ಇಚ್ಛಿಸದ ಜಮೀರ್ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದರು. ಪ್ರಾಥಮಿಕ ಪರಿಶೀಲನೆಯ ಬಳಿಕ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ-1988ರ (2018ರ ತಿದ್ದುಪಡಿ) ಸೆಕ್ಷನ್ 7 ಮತ್ತು 7ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡರು.
ಬಳಿಕ ಕೆಂದ್ರೀಯ ಸದನದಲ್ಲಿರುವ ಅಧೀಕ್ಷಕರ ಕೊಠಡಿಯಲ್ಲೇ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಇಬ್ಬರನ್ನೂ ಬಂಧಿಸಲಾಯಿತು. 8 ಲಕ್ಷ ರೂಪಾಯಿ ಸಂಪೂರ್ಣ ಲಂಚದ ಹಣವನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ವಿಜಯ ಕೃಷ್ಣ (ಪಿಐ-11) ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಉಪ ಪೊಲೀಸ್ ಅಧೀಕ್ಷಕರಾದ ಭರತ್ ರೆಡ್ಡಿ, ತಿಪ್ಪೇಸ್ವಾಮಿ ಹಾಗೂ ಅನಿಲ್ ಕುಮಾರ್ ಅವರ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶಂಕರಪ್ಪ, ಚಿದಾನಂದ ಮೂರ್ತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸಿದರು.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.