

ದಾವಣಗೆರೆ: ಅಕ್ರಮ ಸಂಬಂಧದಿಂದ ಮೂರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನಿಂದಲೇ ಕೊಲೆಯಾಗಿರುವ ಘಟನೆ ದಾವಣಗೆರೆಯ ಶೇಖರಪ್ಪ ನಗರದಲ್ಲಿ ನಡೆದಿದೆ.
45 ವರ್ಷದ ನಾಗರತ್ನ ಕೊಲೆಯಾದ ಮಹಿಳೆಯಾಗಿದ್ದು, 36 ವರ್ಷದ ನಾಗರಾಜ್ ಕೊಲೆ ಆರೋಪಿಯಾಗಿದ್ದಾನೆ. ಈತ ಹಲವು ವರ್ಷಗಳಿಂದ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಕೆಲ ದಿನಗಳಿಂದ ಪದೇ ಪದೇ ಜಗಳ ನಡೆಯುತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಗರತ್ನ ಪತಿಯನ್ನು ತ್ಯಜಿಸಿ ತನ್ನ ಮೂರು ಮಕ್ಕಳನ್ನು ಬೇರೆ ಕಡೆ ಮನೆ ಮಾಡಿ ಬಿಟ್ಟಿದ್ದಳು. ತಾನು ಒಂಟಿಯಾಗಿ ಜೀವನ ಮಾಡುತ್ತಿದ್ದಳು. ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರತ್ನಳಿಗೆ ನಾಗರಾಜ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು ಎಂದು ತಿಳಿದುಬಂದಿದೆ.
ಕೆಲ ದಿನಗಳಿಂದ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜನರು ಈಕೆಯನ್ನು ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಅದರೂ ಕೂಡ ಅಲ್ಲೇ ವಾಸ ಮಾಡುತ್ತಿದ್ದಳು.
ಇಂದು ಬೆಳಗ್ಗೆ 10:30ರ ಸುಮಾರಿಗೆ ಪ್ರಿಯಕರ ನಾಗರಾಜ್, ನಾಗರತ್ನಳನ್ನು ಅವಳ ಮನೆಯ ಮೇಲೆ ಕರೆದೊಯ್ದು ಚಾಕುವಿನಿಂದ ಇರಿದು ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಾಗರತ್ನ ಅವರ ಕಿರುಚಾಟ ಕೇಳಿ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ನಾಗರಾಜನನ್ನು ಹಿಡಿದ ಸ್ಥಳೀಯರು ಆತನನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿದ್ದು, ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ.
ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಆರ್ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.