ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತೀರಾ? ಈ ಲೇಖನವನ್ನೊಮ್ಮೆ ಓದಿ...

ಮೊಬೈಲ್ ಅನ್ನುವುದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಅದನ್ನು ಬಿಟ್ಟಿರಲು ಆಗುತ್ತಿಲ್ಲ. ಹೆಚ್ಚಿನ ಜನರು ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ತಮ್ಮ ಮೊಬೈಲ್ ಫೋನ್ಗಳನ್ನು ನೋಡುತ್ತಾರೆ. ಮೆಸೇಜ್ ನೋಡುವುದು, ಅಲಾರಂ ಆಫ್ ಮಾಡುವುದು ಅಥವಾ ಕರೆಯನ್ನು ಪರಿಶೀಲಿಸುವುದು ಹೀಗೆ...
ಚಿತ್ರವನ್ನು ಪ್ರತಿನಿಧಿಸುವ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
ಚಿತ್ರವನ್ನು ಪ್ರತಿನಿಧಿಸುವ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
Updated on

ಮೊಬೈಲ್ ಅನ್ನುವುದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಅದನ್ನು ಬಿಟ್ಟಿರಲು ಆಗುತ್ತಿಲ್ಲ. ಹೆಚ್ಚಿನ ಜನರು ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ತಮ್ಮ ಮೊಬೈಲ್ ಫೋನ್ಗಳನ್ನು ನೋಡುತ್ತಾರೆ. ಮೆಸೇಜ್ ನೋಡುವುದು, ಅಲಾರಂ ಆಫ್ ಮಾಡುವುದು ಅಥವಾ ಕರೆಯನ್ನು ಪರಿಶೀಲಿಸುವುದು ಹೀಗೆ ಹಲವಾರು ಕಾರಣಗಳಿಗೆ ಹೆಚ್ಚಿನ ಜನರು ಬೆಳಿಗ್ಗೆ ಎದ್ದ ಕೂಡಲೇ ಮೊದಲು ಮೊಬೈಲ್ ನೋಡುತ್ತಾರೆ. ಮೊಬೈಲ್ ಸ್ಕ್ರೋಲಿಂಗ್ ಜನರ ಅಭ್ಯಾಸವಾಗಿ ಮಾರ್ಪಟ್ಟಿದೆ.

ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಎದ್ದ ಬಳಿಕ ಮನೆಯಲ್ಲಿರುವ ದೇವರ ಫೋಟೊಗಳಿಗೆ ನಮಸ್ಕರಿಸುತ್ತಿದ್ದರು ಮತ್ತು ಮನೆಯ ಹೊರಗಡೆ ಇರುವಂತಹ ತುಳಸಿ ಕಟ್ಟೆಗೆ ಕೂಡ ಸುತ್ತು ಹಾಕಿ, ನಮಸ್ಕರಿಸಿ ಬರುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಮೊಬೈಲ್ ನಲ್ಲಿ ವ್ಯಸ್ತರಾಗಿದ್ದು, ಹಾಸಿಗೆಯಿಂದ ಎದ್ದ ಕೂಡಲೇ ಅವರು ಮೊಬೈಲ್ ನೋಡುವುದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಕೆಲವರು ಎದ್ದು ನಿತ್ಯಕರ್ಮಗಳನ್ನು ಪೂರೈಸುವ ಮೊದಲೇ ಮೊಬೈಲ್ ಕೈಗೆತ್ತಿಕೊಳ್ಳುವರು. ಈ ಡಿಜಿಟಲ್ ಗ್ಯಾಜೆಟ್ ಗಳು ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಎದ್ದ ಕೂಡಲೇ ಮೊಬೈಲ್ ಬಳಕೆ ಮಾಡುವವರು ನೀವಾಗಿದ್ದರೆ ಖಂಡಿತವಾಗಿಯೂ ಈ ಲೇಖನವನ್ನೊಮ್ಮೆ ಓದಿ.

ಬೆಳಗ್ಗೆ ಎದ್ದಾಗ ಮೊಬೈಲ್​ನಲ್ಲಿ ಇ-ಮೇಲ್ ಚೆಕ್ ಮಾಡುವುದು, ವಾಟ್ಸಾಪ್ ನೋಡುವುದು, ಯೂಟ್ಯೂಬ್, ಇನ್​ಸ್ಟಾಗ್ರಾಂ ನೋಡುವ ಅಭ್ಯಾಸಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದ ರಾತ್ರಿಯಿಡೀ ರಿಲ್ಯಾಕ್ಸ್​ ಆಗಿದ್ದ ಮೆದುಳಿಗೆ ಇದ್ದಕ್ಕಿದ್ದಂತೆ ಒತ್ತಡ ನೀಡಿದಂತಾಗುತ್ತದೆ.

ಮೆದುಳು ಬಹಳಷ್ಟು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆಳಿಗ್ಗೆ ನಮ್ಮ ಫೋನ್‌ಗಳನ್ನು ಮೊದಲು ಪರಿಶೀಲಿಸುವುದರಿಂದ ನಾವು ನಮ್ಮ ಬೆಳಗಿನ ದಿನಚರಿಯನ್ನು ಕಳೆದುಕೊಳ್ಳುತ್ತೇವೆ. ನಾವು ನಮ್ಮ ಫೋನ್‌ಗಳಿಗೆ ದಾಸರಾಗುತ್ತೇವೆ. ಇದು ನಮ್ಮ ಆ ದಿನದ ಬಿಹೇವಿಯರ್ ಮತ್ತು ಮೂಡ್ ಮೇಲೂ ಪರಿಣಾಮ ಬೀರುತ್ತದೆ.

ಇಂದಿನ ಯುಗದಲ್ಲಿ ರಾತ್ರಿ ಮಲಗುವಾಗ ಒತ್ತಡದ ಹೊರೆಯನ್ನು ಹೊತ್ತುಕೊಂಡೇ ಮಲಗುವ ನಾವು ಬೆಳಿಗ್ಗೆ ಎದ್ದ ಮೇಲೂ ಅದನ್ನು ಹೊತ್ತುಕೊಂಡೇ ತಿರುಗುತ್ತೇವೆ. ದಿನವಿಡಿ ಒತ್ತಡದಲ್ಲೇ ಕಳೆಯುವ ಮೂಲಕ ಅಂದಿನ ದಿನವನ್ನು ಮುಗಿಸುತ್ತೇವೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರಿಕಿರಿ ಅನುಭವಿಸುವಂತಾಗುವುದು ಸುಳ್ಳಲ್ಲ. ಆದರೆ ದಿನವನ್ನು ಆರಂಭಿಸುವ ಮೊದಲೇ ಮನಸ್ಸನ್ನು ಪ್ರಫ್ಲುಲವಾಗಿಸಿಕೊಂಡರೆ ಇಡೀ ದಿನವನ್ನು ಸಂತಸ ಹಾಗೂ ಉತ್ಸಾಹದಿಂದಿರಿಸಿಕೊಳ್ಳಬಹುದು.

ಹಾಗಾದರೆ ಗೊಂದಲ ರಹಿತ, ನಿರ್ಮಲ ಮನಸ್ಸಿನಿಂದ ದಿನವನ್ನು ಆರಂಭಿಸುವುದು ಹೇಗೆ?

ಇಲ್ಲಿವೆ ಕೆಲವು ಸಲಹೆಗಳು...

  • ಇಂದಿನ ನಮ್ಮ ಬೆಳಗು ಉತ್ಸಾಹದಿಂದರಬೇಕು ಎಂದರೆ ನಿನ್ನೆ ನಾವು ಮಲಗಿದ ರೀತಿ ಬಹಳ ಮುಖ್ಯವಾಗುತ್ತದೆ. ದಿಂಬಿಗೆ ತಲೆಯಾನಿಸುವ ಮೊದಲು ನಿಮಗಾಗಿ, ಮನಸ್ಸಿಗೆ ಖುಷಿ ಕೊಡುವ ಕೆಲವು ಅಭ್ಯಾಸಗಳನ್ನು ಪಾಲಿಸಲು ಕಲಿಯಿರಿ. ದಿನಚರಿಯನ್ನು ರೂಢಿಸಿಕೊಳ್ಳುವುದು ಉತ್ತಮ ನಿದ್ದೆಗೆ ಸಹಕರಿಸುವ ಪ್ರಮುಖ ಅಂಶ. ಮಲಗುವ ಮೊದಲು ಈ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಬೆಳಿಗ್ಗೆ ಎದ್ದ ಕೂಡಲೇ ಮನಸ್ಸಿಗೆ ಒತ್ತಡ ನೀಡುವ ಕೆಲಸಗಳನ್ನು ರಾತ್ರಿಯೇ ಮುಗಿಸಿ ಇಡಿ. ಇದರಿಂದ ಬೆಳಿಗ್ಗೆ ಎದ್ದ ಕೂಡಲೇ ಮನಸ್ಸಿಗೆ ಒತ್ತಡವಾಗದೇ ಮನಸ್ಸು ಖುಷಿಯಿಂದ ಇರುತ್ತದೆ.
  • ನಮ್ಮ ಮನಸ್ಸು, ದೇಹ ಎರಡೂ ದಿನವಿಡೀ ಸಂತಸದಿಂದಿರಬೇಕು ಎಂದರೆ ಕನಿಷ್ಠ 7 ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯ. ರಾತ್ರಿ ವೇಳೆ ಯಾವುದೇ ಗದ್ದಲ, ಗೊಂದಲಗಳಿಲ್ಲದೆ ನೆಮ್ಮದಿಯಿಂದ ನಿದ್ದೆ ಮಾಡಿದರೆ ಮರುದಿನ ಬೆಳಿಗ್ಗೆ ಮನಸ್ಸು ದೇಹ ಎರಡೂ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತವೆ.
  • ಜಿಮ್‌, ಯೋಗ ತರಗತಿಗೆ ಹೋಗಲು ಸಾಧ್ಯವಾಗದೇ ಇದ್ದರೂ ಮನೆಯಲ್ಲೇ ಕೆಲವೊಂದು ವ್ಯಾಯಾಮಗಳನ್ನು ಮಾಡಿ. ಮನೆಯ ಸುತ್ತಲಿನ ಪರಿಸರದಲ್ಲೇ ವಾಕಿಂಗ್‌ ಅಥವಾ ಜಾಗಿಂಗ್‌ ಹೋಗಿ. ಬೆಳಗಿನ ವೇಳೆ ದೇಹವನ್ನು ದಂಡಿಸುವುದರಿಂದ ದೇಹವನ್ನು ಎಚ್ಚರಗೊಳಿಸಿದಂತಾಗುತ್ತದೆ. ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡಿ. ಇದರಿಂದ ದೇಹ ದಿನವಿಡಿ ಚುರುಕಾಗಿರುತ್ತದೆ.
  • ದಿನವನ್ನು ಸಂತಸದಿಂದ ಆರಂಭಿಸಬೇಕು ಎಂದರೆ ಬೆಳಿಗ್ಗೆ ಎದ್ದ ಕೂಡಲೇ ನಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೆ ಕನಿಷ್ಠ 15 ನಿಮಿಷಗಳ ಕಾಲ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಧ್ಯಾನ ಬಳಿಕ ನಿಮ್ಮ ಮನಸ್ಸಿಗೆ ಖುಷಿ ಕೊಡುವ ಹವ್ಯಾಸದಲ್ಲಿ ಒಂದಿಷ್ಟು ಹೊತ್ತು ತೊಡಗಿಕೊಂಡರೆ ಆ ದಿನ ರಾತ್ರಿ ಮಲಗುವವರೆಗೂ ನೀವು ಉತ್ಸಾಹದಿಂದಿರುತ್ತೀರಿ.
  • ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ನಮಗಾಗಿ ನಾವು ಸಂತೋಷದ ಗಳಿಗೆಯನ್ನು ಹುಡುಕಿಕೊಂಡಂತೆ. ಹೊಸ ಅಭ್ಯಾಸಗಳಿಗೆ ಮನಸ್ಸನ್ನು ತೆರೆದಿಟ್ಟಾಗ ಮನಸ್ಸು ಕಲಿಕೆಯಲ್ಲಿ ತೊಡಗುತ್ತದೆ. ಅಲ್ಲದೇ ಬೇರೆ ವಿಷಯ ಮನಸ್ಸಿನಲ್ಲಿ ಸುಳಿಯದಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹ, ಮನಸ್ಸು ಎರಡೂ ಇಲ್ಲದ ಗೊಂದಲಗಳಿಂದ ಒತ್ತಡ ಸೃಷ್ಟಿಸಿಕೊಳ್ಳುವುದನ್ನು ನಿಲ್ಲಿಸುತ್ತವೆ.
  • ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಸುಂದರ ಬದುಕಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುವ ಅಭ್ಯಾಸ ರೂಢಿಸಿಕೊಳ್ಳಿ. ಜಗತ್ತಿನ ಸೃಷ್ಟಿಗೆ ಧನ್ಯವಾದ ತಿಳಿಸಿ. ಪ್ರಕೃತಿ, ಮರ-ಗಿಡ, ಸೂರ್ಯ ದೇವ, ಪ್ರಾಣಿ-ಪಕ್ಷಿಗಳು, ತಂದೆ-ತಾಯಿ ಇವೆಲ್ಲರೂ ನಾವು ಹುಟ್ಟಿದ ದಿನಗಳಿಂದ ನಮ್ಮ ಜೊತೆ ಇದ್ದಾರೆ. ನಮ್ಮ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದ ಹೇಳುವ ಮೂಲಕ ಕತೃಜ್ಞತೆ ಸಲ್ಲಿಸುವ ಅಭ್ಯಾಸ ಮಾಡಿಕೊಳ್ಳಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com