ಮಾಜಿ ಪಿಎಂಗೆ ವಿಚಾರಣೆ ಬಿಸಿ

ಕಲ್ಲಿದ್ದಲು ಹಗರಣ ಸಂಬಂಧ ಇನ್ನೂ ಏಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರನ್ನು...
ಮಾಜಿ ಪಿಎಂಗೆ ವಿಚಾರಣೆ ಬಿಸಿ

ನವದೆಹಲಿ: ಕಲ್ಲಿದ್ದಲು ಹಗರಣ ಸಂಬಂಧ ಇನ್ನೂ ಏಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ವಿಚಾರಣೆಗೊಳಪಡಿಸಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ಖಾರವಾಗಿ ಪ್ರಶ್ನಿಸಿದೆ.

ಹಗರಣ ಸಂಬಂಧ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ, ಅವರನ್ನೂ ವಿಚಾರಣೆ ನಡೆಸಿ ಎಂದು ತನಿಖಾ ಸಂಸ್ಥೆಗೆ ಆದೇಶ ನೀಡಿದೆ. ಇದಲ್ಲದೇ ಹಗರಣದ ಆರೋಪ ಎದುರಿಸುತ್ತಿರುವ ಖ್ಯಾತ ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ ಹಾಗೂ ಕಲ್ಲಿದ್ದಲು ಖಾತೆ ಮಾಜಿ ಕಾರ್ಯದರ್ಶಿ ಪಿ.ಸಿ ಪಾರಖ್ ಅವರ ಹೇಳಿಕೆಯನ್ನೂ ಪಡೆಯುವಂತೆ ಕೋರ್ಟ್ ಸೂಚಿಸಿದೆ.

ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಭರತ್ ಪರಾಶರ್, ಪಿ.ಸಿ ಪಾರಖ್, ಕೆ.ಎಂ. ಬಿರ್ಲಾಗೆ ಕ್ಲೀನ್‌ಚಿಟ್ ನೀಡಿದ್ದ ತನಿಖಾ ಸಂಸ್ಥೆಯ ಕ್ರಮವನ್ನೂ ಪ್ರಶ್ನಿಸಿದ್ದಾರೆ. ಅಲ್ಲದೇ ಮುಕ್ತಾಯ ವರದಿಗೂ ಆಕ್ಷೇಪ ವ್ಯಕ್ತಪಡಿಸಿದ್ದು, 2005ರಲ್ಲಿ ಒಡಿಶಾದ ತಾಲ್‌ಬಿರಾ ಕಲ್ಲಿದ್ದಲು ಎರಡನೇ ಬ್ಲಾಕ್ ಅನ್ನು ಹಿಂಡಾಲ್ಕೋ ಕಂಪನಿಗೆ ನೀಡಿದ್ದರಲ್ಲಿ ಆಗಿದ್ದ ಅವ್ಯವಹಾರದ ತನಿಖೆಯನ್ನು ಪುನಃ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ.

ವಿಚಾರಣೆ ನಡೆಸಿ: ಯಾವುದೇ ವ್ಯಕ್ತಿ ಮೇಲೆ ಒಂದು ಆರೋಪ ಬಂದರೆ ಅಥವಾ ಈ ಆರೋಪ ಮೇಲ್ನೋಟಕ್ಕೆ ಸರಿ ಎಂದೆನಿಸಿದರೆ, ಅಂಥವರ ವಿಚಾರಣೆ ನಡೆಸುವುದು ಸೂಕ್ತವಾದ ಕ್ರಮ. ಈ ಪ್ರಕರಣದಲ್ಲೂ ಡಾ.ಮನಮೋಹನ್ ಸಿಂಗ್ ಆ ಸಂದರ್ಭದಲ್ಲಿ ಕಲ್ಲಿದ್ದಲು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಹೀಗಾಗಿ ಅವರ ವಿಚಾರಣೆ ಆಗಬೇಕು ಎಂದು ನ್ಯಾ.ಪರಾಶರ್ ಹೇಳಿದ್ದಾರೆ.

ಬಿ.ವಿ.ಆರ್.ಸುಬ್ರಮಣ್ಯಂ ಅವರ ವಿಚಾರಣೆ ಹಾಗೂ ನಾಯರ್ ಅವರ ಮರುವಿಚಾರಣೆಯನ್ನು ಶೀಗ್ರ ನಡೆಸಿ, ಜ.27ರೊಳಗೆ ಯಥಾಸ್ಥಿತಿ ವರದಿ ಸಲ್ಲಿಸಿ ಎಂದಿದ್ದಾರೆ.

ಬಿಜೆಪಿ ಸ್ವಾಗತ
ಮನಮೋಹನ್ ಸಿಂಗ್ ಅವರ ವಿಚಾರಣೆಗೆ ವಿಶೇಷ ಕೋರ್ಟ್ ಆದೇಶ ನೀಡಿರುವುದನ್ನು ಸ್ವಾಗತಿಸಿರುವ ಬಿಜೆಪಿ, ಇವರ ವಿಚಾರಣೆ ನಡೆಸಬೇಕೆಂದು ನಾವು ಅಂದಿನಿಂದಲೇ ಹೇಳುತ್ತಾ ಬಂದಿದ್ದೆವು. ಆದರೆ, ಇಂದು ಕಾನೂನೇ ಅದನ್ನು ಪುನರುಚ್ಚರಿಸಿದೆ ಎಂದು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ಜಾರಿಕೊಂಡ ಕಾಂಗ್ರೆಸ್

ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರತಿಕ್ರಿಯಿಸಿ, ಕೋರ್ಟ್ ಆದೇಶದ ಪ್ರತಿ ಇನ್ನೂ ತಲುಪಿಲ್ಲ. ಅದನ್ನು ನೋಡಿದ ನಂತರವಷ್ಟೇ ಹೇಳಿಕೆ ನೀಡಲು ಸಾಧ್ಯ ಎಂದು ಜಾರಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com