ನಾನು ಪಾಕಿಸ್ತಾನಿ; ಹಿಂದೂಗಳನ್ನು ಕೊಲ್ಲಲು ಬಂದೆ; ಮಜವಾಗಿದೆ: ಉಗ್ರ ಉಸ್ಮಾನ್

ನಾನೊಬ್ಬ ಭಯೋತ್ಪಾದಕ. ಭಾರತದಲ್ಲಿ ಪ್ರತಿದಿನ ಕಾಶ್ಮೀರಿ ಜನರನ್ನು ಹತ್ಯೆ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯರ ಮೇಲೆ ಸೇಡು ತೀರಿಸಿಕೊಳ್ಳಲು...
ಉಗ್ರ ಉಸ್ಮಾನ್ ಖಾನ್
ಉಗ್ರ ಉಸ್ಮಾನ್ ಖಾನ್
ನವದೆಹಲಿ: ನಾನೊಬ್ಬ ಭಯೋತ್ಪಾದಕ. ಭಾರತದಲ್ಲಿ ಪ್ರತಿದಿನ ಕಾಶ್ಮೀರಿ ಜನರನ್ನು ಹತ್ಯೆ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯರ ಮೇಲೆ ಸೇಡು ತೀರಿಸಿಕೊಳ್ಳಲು ನಾನು ಭಾರತಕ್ಕೆ ಬಂದಿದ್ದೆ ಎಂದು ಸೆರೆ ಸಿಕ್ಕಿರುವ ಉಗ್ರ ಉಸ್ಮಾನ್ ಖಾನ್ ಹೇಳಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿದಿನ ಜನರ ಹತ್ಯೆ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯರನ್ನು ಕೊಂದು ಸೇಡು ತೀರಿಸಿಕೊಳ್ಳುವ ಸಲುವಾಗಿ 12 ದಿನಗಳ ಹಿಂದೆ ಉಧಂಪುರ ಗಡಿಯಿಂದ ಭಾರತಕ್ಕೆ ಪ್ರವೇಶಿಸಿದ್ದೇವು. ಅಮರನಾಥ್ ಯಾತ್ರೆಯೇ ನಮ್ಮ ಟಾರ್ಗೆಟ್ ಆಗಿತ್ತು ಎಂದು ಉಗ್ರ ಉಸ್ಮಾನ್ ಪೊಲೀಸರಿಗೆ ತಿಳಿಸಿದ್ದಾನೆ. 
ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಸಮ್ರೌಲಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ  ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಮೃತಪಟ್ಟಿದ್ದರು. ಉಗ್ರರ ವಿರುದ್ಧ ಪ್ರತಿದಾಳಿ ನಡೆಸಿದ್ದ ಪರಿಣಾಮ ಉಗ್ರನೊಬ್ಬ ಮೃತಪಟ್ಟಿದ್ದು, ಉಸ್ಮಾನ್ ಖಾನ್ ನನ್ನು ಸ್ಥಳೀಯರೇ ಸೆರೆ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು.

ಪೊಲೀಸರನ್ನು ಗೊಂದಲಕ್ಕೆ ಸಿಕ್ಕಿಸುವ ಸಲುವಾಗಿ ಉಗ್ರ ನಾವಿದ್‌ ಮೊದಲಿಗೆ ಕಾಸೀಂ ಖಾನ್, ನಂತರ ಉಸ್ಮಾನ್ ಖಾನ್ ಬಳಿಕ ಫೈಸ್ಲಾಬಾದ್‌‌ನ ಘುಲಾಮ್ ಮುಸ್ತಾಫಬಾದ್‌ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಈತನಿಗೆ ಒಬ್ಬ ಸಹೋದರಿ ಹಾಗೂ ಇಬ್ಬರು ಸಹೋದರರು ಇದ್ದಾರೆ. ಅವರಲ್ಲಿ ಒಬ್ಬರು ಉಪನ್ಯಾಸಕರಾಗಿದ್ದು, ಮತ್ತೊಬ್ಬರು ಜವಳಿ ವ್ಯಾಪಾರಿ, ಎಂದು ಹೇಳಿದ್ದಾನೆ. 

ಜಮ್ಮುವಿನ ತನಿಖಾ ಕೇಂದ್ರವೊಂದರಲ್ಲಿ ನಾವಿದ್‌ನ ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ತಿಂಗಳು ನಾಲ್ವರು ಉಗ್ರರೊಂದಿಗೆ ಉತ್ತರ ಕಾಶ್ಮೀರದ ಕುಪ್ವಾರವನ್ನು ನಾವಿದ್ ಪ್ರವೇಶಿಸಿದ್ದ. ಆತನನ್ನು ಬರಮಾಡಿಕೊಳ್ಳಬೇಕಾಗಿದ್ದ ಗೈಡ್ ಬಾರದ ಕಾರಣ ಹಿಂದಿರುಗಿದ್ದಾಗಿ ಹೇಳಿದ್ದಾನೆ. 

ಇವನೊಂದಿಗಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿಗೆ ಬಲಿಯಾದ ಉಗ್ರ ಪಾಕಿಸ್ತಾನದ ಭಾವಲ್‌ಪುರ್‌ನ ನೊಮನ್ ಅಲಿಯಾಸ್ ಮೊಮಿನ್ ಎಂದು ನಾವಿದ್ ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com