ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಸಮ್ರೌಲಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಮೃತಪಟ್ಟಿದ್ದರು. ಉಗ್ರರ ವಿರುದ್ಧ ಪ್ರತಿದಾಳಿ ನಡೆಸಿದ್ದ ಪರಿಣಾಮ ಉಗ್ರನೊಬ್ಬ ಮೃತಪಟ್ಟಿದ್ದು, ಉಸ್ಮಾನ್ ಖಾನ್ ನನ್ನು ಸ್ಥಳೀಯರೇ ಸೆರೆ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು.
ಪೊಲೀಸರನ್ನು ಗೊಂದಲಕ್ಕೆ ಸಿಕ್ಕಿಸುವ ಸಲುವಾಗಿ ಉಗ್ರ ನಾವಿದ್ ಮೊದಲಿಗೆ ಕಾಸೀಂ ಖಾನ್, ನಂತರ ಉಸ್ಮಾನ್ ಖಾನ್ ಬಳಿಕ ಫೈಸ್ಲಾಬಾದ್ನ ಘುಲಾಮ್ ಮುಸ್ತಾಫಬಾದ್ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಈತನಿಗೆ ಒಬ್ಬ ಸಹೋದರಿ ಹಾಗೂ ಇಬ್ಬರು ಸಹೋದರರು ಇದ್ದಾರೆ. ಅವರಲ್ಲಿ ಒಬ್ಬರು ಉಪನ್ಯಾಸಕರಾಗಿದ್ದು, ಮತ್ತೊಬ್ಬರು ಜವಳಿ ವ್ಯಾಪಾರಿ, ಎಂದು ಹೇಳಿದ್ದಾನೆ.
ಜಮ್ಮುವಿನ ತನಿಖಾ ಕೇಂದ್ರವೊಂದರಲ್ಲಿ ನಾವಿದ್ನ ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ತಿಂಗಳು ನಾಲ್ವರು ಉಗ್ರರೊಂದಿಗೆ ಉತ್ತರ ಕಾಶ್ಮೀರದ ಕುಪ್ವಾರವನ್ನು ನಾವಿದ್ ಪ್ರವೇಶಿಸಿದ್ದ. ಆತನನ್ನು ಬರಮಾಡಿಕೊಳ್ಳಬೇಕಾಗಿದ್ದ ಗೈಡ್ ಬಾರದ ಕಾರಣ ಹಿಂದಿರುಗಿದ್ದಾಗಿ ಹೇಳಿದ್ದಾನೆ.
ಇವನೊಂದಿಗಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿಗೆ ಬಲಿಯಾದ ಉಗ್ರ ಪಾಕಿಸ್ತಾನದ ಭಾವಲ್ಪುರ್ನ ನೊಮನ್ ಅಲಿಯಾಸ್ ಮೊಮಿನ್ ಎಂದು ನಾವಿದ್ ಹೇಳಿದ್ದಾನೆ.