ಚೆನ್ನೈ: ಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿದ್ದ ಚೆನ್ನೈ ನಗರ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುವ ಸೂಚನೆ ನಶಿಸಿದ್ದು, ಚೆನ್ನೈನಲ್ಲಿ ಮತ್ತೆ ಮಳೆ ಬರುತ್ತಿದೆ.
ಬೆಳಗ್ಗೆಯಿಂದ ಮಳೆ ನಿಂತಿದ್ದು, ಹಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಮತ್ತೆ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ನೀರಿನ ಮಟ್ಟ ಹೆಚ್ಚುತ್ತಿದ್ದು ಮನೆಬಿಟ್ಟು ಹೊರಬರದಂತೆ ಸರ್ಕಾರ ಸೂಚಿಸಿದೆ. ಅಲ್ಲದೆ ಮಳೆಯಿಂದಾಗಿ ಚೆನ್ನೈ ಮಹಾನಗರ ಹಲವು ಕಡೆ ವಿದ್ಯುತ್ ಸ್ಧಗಿತಗೊಳಿಸಲಾಗಿದೆ. ಮಳೆಯ ನಡುವೆಯೂ ಎನ್ಡಿಆರ್ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು, ಸಾವಿರಾರು ಜನರನ್ನು ರಕ್ಷಿಸಿದೆ.
ಚೆನ್ನೈ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಮಳೆ ಸುರಿಯುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿ ಎದುರಾಗಿದೆ. ಪುದುಚೇರಿ, ನಾಗಪಟ್ಟಣಂ, ಕಡಲೂರು, ತಿರುನಲ್ವೇಲಿ, ಮಧುರೈ ಕಾಂಚಿಪುಂರ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದೆ.
ಉಚಿತ ಬಸ್ ಸೇವೆಗೆ ಸರ್ಕಾರ ಚಿಂತನೆ
ಮತ್ತೆ ಮಳೆ ಬರುತ್ತಿರುವುದರಿಂದ ಚೆನ್ನೈನಿಂದ ಹೊರಹೋಗುವವರಿಗೆ ಉಚಿತ ಬಸ್ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ. ಕೊಯಂಬೇಡು ಬಸ್ ನಿಲ್ದಾಣದಲ್ಲಿ ಸುಮಾರು 7 ಸಾವಿರ ಜನ ಬಸ್ ಗಳಿಗಾಗಿ ಕಾಯುತ್ತಿದ್ದಾರೆ.