ನವದೆಹಲಿ: ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಹೆಚ್ಚಾಗಿ ಕಲಾಪ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸರ್ವಪಕ್ಷ ಸಭೆ ಮುಕ್ತಾಯಗೊಂಡಿದ್ದು, ಮಸೂದೆ ಅಂಗೀಕಾರಕ್ಕೆ ವಿಪಕ್ಷಗಳ ಸಹಕಾರ ಪಡೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
ಹಮೀದ್ ಅನ್ಸಾರಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು ಜಿಎಸ್ ಟಿ ಮಸೂದೆಯೊಂದನ್ನು ಹೊರತುಪಡಿಸಿ ಎನ್ ಡಿ.ಎ ಸರ್ಕಾರದ ಉಳಿದೆಲ್ಲಾ ಮಸೂದೆಗಳ ಅಂಗೀಕಾರಕ್ಕೂ ರಾಜ್ಯಸಭೆಯಲ್ಲಿ ಸಹಕರಿಸುವುದಾಗಿ ವಿಪಕ್ಷಗಳು ತಿಳಿಸಿವೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಸಂಸತ್ ಅಧಿವೇಶನದ ಬಹುತೇಕ ಕಲಾಪಗಳು ವ್ಯರ್ಥವಾಗುತ್ತಿದ್ದು, ಜಿಎಸ್ ಟಿ ಸೇರಿದಂತೆ ಹಲವು ಮಸೂದೆಗಳು ಅಂಗೀಕಾರವಾಗುವುದು ಬಾಕಿ ಇದೆ. ಆದರೆ ಕಾಂಗ್ರೆಸ್ ಸದಸ್ಯರು ಉಂಟುಮಾಡುತ್ತಿರುವ ಗದ್ದಲದಿಂದಾಗಿ ಕಲಾಪ ಮುಂದೂಡಲ್ಪಡುತ್ತಿದ್ದು ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಎಸ್/ಎಸ್ ಸಿ ಹಾಗೂ ಬಡತನಕ್ಕೆ ಸಂಬಂಧಿಸಿದ ಮಸೂದೆಗಳ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
Advertisement