ದೇಶ
ಅಜಿತ್ ದೋವಲ್-ಪಾಕಿಸ್ತಾನದಲ್ಲಿ ಮುಸ್ಲಿಂ ಆಗಿ 7 ವರ್ಷ ಕಳೆದ ಭಾರತೀಯ ಬೇಹುಗಾರ
ಭಾರತದ ಪರ ಬೇಹುಕಾರನಾಗಿ ತಾನು ಏಳು ವರ್ಷಗಳ ಕಾಲ ಪಾಕಿಸ್ತಾನದ ಲಾಹೋರ್ನಲ್ಲಿದ್ದೆ. ಅಲ್ಲಿ ನಾನು 7 ವರ್ಷ ಮುಸ್ಲಿಂ ಆಗಿದ್ದೆ...
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ರಕ್ಷಣಾ ಸಲಹೆಗಾರ (ಎನ್ಎಸ್ಎ) ಆಗಿ ನಿಯೋಜಿಸಿದ ನಂತರವೇ ಈ ಬೇಹುಗಾರನ ವೃತ್ತಿನಿಷ್ಠೆಯ ಬಗ್ಗೆ ಕತೆಗಳು ಬಹಿರಂಗವಾಗತೊಡಗಿದ್ದು.
ಕೇರಳ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ದೋವಲ್ 2005 ರಲ್ಲಿ ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿ ನಿವೃತ್ತರಾಗಿದ್ದರು.
ಸದ್ಯ ಎನ್ಎಸ್ಎ ಯಲ್ಲಿ ಕಾರ್ಯ ವೆಸಗುತ್ತಿರುವ ಇವರನ್ನು ಭಾರತದ ಜೇಮ್ಸ್ ಬಾಂಡ್ ಎಂದೇ ಕರೆಯಲಾಗುತ್ತದೆ. ಭಾರತದ ಪರ ಬೇಹುಕಾರನಾಗಿ ತಾನು ಏಳು ವರ್ಷಗಳ ಕಾಲ ಪಾಕಿಸ್ತಾನದ ಲಾಹೋರ್ನಲ್ಲಿದ್ದೆ. ಅಲ್ಲಿ ನಾನು 7 ವರ್ಷ ಮುಸ್ಲಿಂ ಆಗಿದ್ದೆ ಎಂಬ ವಿಷಯವನ್ನು ದವಾಲ್ ವೀಡಿಯೋವೊಂದರಲ್ಲಿ ಹೇಳಿದ್ದಾರೆ.
ವೀಡಿಯೋದಲ್ಲಿ ದೋವಲ್ ಹೇಳಿದ್ದೇನು?
ನೀವು ಏಳು ವರ್ಷಗಳ ಕಾಲ ಪಾಕ್ನಲ್ಲಿದ್ದರಾ?
ಹೌದು, ನಾನು ಏಳು ವರ್ಷಗಳ ಕಾಲ ಪಾಕಿಸ್ತಾನದಲ್ಲಿದ್ದೆ. ಅಲ್ಲಿ ನಾನು ಇದ್ದದ್ದು ಮುಸ್ಲಿಂ ಆಗಿ.
ಹಾಗಾದರೆ ನಿಮ್ಮನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದ ಘಟನೆಗಳೇನಾದರೂ ಇವೆಯೇ?
ಒಂದು ಘಟನೆ ಹೇಳುತ್ತೇನೆ. ಒಂದು ದಿನ ನಾನು ಮಸೀದಿಯಿಂದ ಹೊರಗೆ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಅಲ್ಲೇ ದಾರಿ ಮೂಲೆಯಲ್ಲಿ ಕುಳಿತಿದ್ದ. ಆತ ನನ್ನನ್ನು ನೋಡಿದ ಕೂಡಲೇ ನನ್ನನ್ನು ಅತ್ತ ಕರೆದ. ನೀನು ಹಿಂದೂ ಧರ್ಮದವನೇ? ಆತ ನನ್ನಲ್ಲಿ ಕೇಳಿದ. ನಾನು ಅಲ್ಲ ಅಂದೆ. ಆಮೇಲೆ ಆತ ನನ್ನೊಂದಿಗೆ ಬಾ ಎಂದ. ಹಾಗೆ ಅವನು ನನ್ನನ್ನು ಒಂದು ಪುಟ್ಟ ಕೊಠಡಿಗೆ ಕರೆದುಕೊಂಡು ಹೋದ. ಆಮೇಲೆ ಕೊಠಡಿ ಬಾಗಿಲು ಹಾಕಿ ಅವನು ಹೇಳಿದ..ನೋಡು...ನೀನೊಬ್ಬ ಹಿಂದೂ. ನೀವ್ಯಾಕೆ ಹೀಗೆ ಹೇಳ್ತಾ ಇದ್ದೀರಾ? ನಾನು ಅವರಲ್ಲಿ ಕೇಳಿದೆ. ನೋಡಿ ನಿಮ್ಮ ಕಿವಿ ಚುಚ್ಚುಲಾಗಿದೆ ಎಂದು ಅವ ಹೇಳಿದ. ನೋಡಪ್ಪಾ..ನಮ್ಮ ಊರಲ್ಲಿ ಒಂದು ಸಂಪ್ರದಾಯವಿದೆ. ಅಲ್ಲಿ ಎಲ್ಲರಿಗೂ ಕಿವಿ ಚುಚ್ಚಲಾಗುತ್ತದೆ. ನಾನು ಹುಟ್ಟುವಾಗ ಹಿಂದೂವಾಗಿ ಹುಟ್ಟಿದ್ದೆ. ಆಮೇಲೆ ಮತಾಂತರಗೊಂಡೆ ಎಂದು ಹೇಳಿದೆ. ಅದಕ್ಕೆ ಅವನು ನೀನು ಮತಾಂತರಗೊಳ್ಳಲೇ ಇಲ್ಲ ಎಂದು ಹೇಳಿದ. ಆಮೇಲೆ ಹೇಳಿದ, ನೋಡು ಕಿವಿ ಚುಚ್ಚಿದ್ದನ್ನು ಪ್ಲಾಸ್ಟಿಕ್ ಸರ್ಜರಿ ಮಾಡು. ಹೀಗೆ ಅಡ್ಡಾಡುವುದು ಸರಿಯಲ್ಲ.
ನಾನು ಕೇಳಿದೆ..ನೀನು ಈ ರೀತಿ ಕೇಳಲು ಕಾರಣವಾದರೂ ಏನು?
ಆವಾಗ ಅವನು, ನೋಡು ನಾನೂ ಒಬ್ಬ ಹಿಂದೂ. ನಾನಿಲ್ಲಿ ಮುಸ್ಲಿಂ ಆಗಿದ್ದೀನಿ. ಇಲ್ಲಿ ನನ್ನ ಕುಟುಂಬವನ್ನು ಹತ್ಯೆಗೈದಿದ್ದಾರೆ. ನಾನು ಹೀಗೆ ಮುಸ್ಲಿಂ ಆಗಿ ಬದುಕು ಸಾಗಿಸುತ್ತಿದ್ದೀನಿ. ಹಾಗೆ ಹೇಳಿ ಆತ ಕೊಠಡಿಯಲ್ಲಿ ಅಡಗಿಸಿಟ್ಟಿದ್ದ ಶಿವ ಮತ್ತು ದುರ್ಗೆಯರ ಮೂರ್ತಿ ತೋರಿಸಿದ. ನಾನು ನಮ್ಮ ದೇವರನ್ನು ಪೂಜಿಸುತ್ತೇನೆ. ಹಾಗೆಯೇ ಇಲ್ಲಿ ಮಸೀದಿಗಳಿಗೂ ಹೋಗುತ್ತೇನೆ.
ಹಲವಾರು ಬಾರಿ ನನಗೆ ಆತನಿಗೆ ಸಹಾಯ ಮಾಡಬೇಕೆಂದು ಅನಿಸಿತ್ತು. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ ಎಂದು ದೋವಲ್ ಹೇಳಿರುವುದು ಈ ವೀಡಿಯೋದಲ್ಲಿದೆ.
ಏತನ್ಮಧ್ಯೆ, ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಅವರನ್ನು ಭಾರತಕ್ಕೆ ಕರೆ ತರಲು ಎನ್ಎಸ್ಎ ರಹಸ್ಯ ಮಿಷನ್ವೊಂದನ್ನು ರೂಪಿಸಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.