ರೈತ ವಿರೋಧಿ ಅಂಶ ಇದ್ದರೆ, ಭೂಸ್ವಾಧೀನ ಮಸೂದೆ ಬದಲಾವಣೆಗೆ ಸಿದ್ಧ: ಮೋದಿ
ನವದೆಹಲಿ: ಉದ್ದೇಶಿತ ಭೂಸ್ವಾಧೀನ ಮಸೂದೆಯಲ್ಲಿ ಯಾವುದೇ ರೈತ ವಿರೋಧಿ ಅಂಶಗಳು ಪತ್ತೆಯಾದರೆ, ಮಸೂದೆಯಲ್ಲಿ ಬದಲಾವಣೆ ಮಾಡಲು ತಾವು ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ, ಮೊದಲು ಭೂಸ್ವಾಧೀನ ಮಸೂದೆಯಲ್ಲಿನ ಅಂಶಗಳನ್ನು ತಿಳಿಯುವ ಕೆಲಸ ಮಾಡಿ. ಭೂಸ್ವಾಧೀನ ತಿದ್ದುಪಡಿ ಮಸೂದೆ ಮಾಡಿದ್ದೇ ರೈತರ ಸ್ಥಿತಿಯನ್ನು ಸುಧಾರಿಸಲು. ಇದರಿಂದ ಮೂಲಭೂತ ಸೌಲಭ್ಯಕ್ಕೆ ಮತ್ತು ಕೈಗಾರಿಕೆಗಳಿಗೆ ಸುಲಭವಾಗಿ ಭೂಮಿ ವಶಪಡಿಸಿಕೊಳ್ಳಬಹುದು ಎಂಬುದು ಸುಳ್ಳು ಎಂದಿದ್ದಾರೆ.
ಭೂಸ್ವಾಧೀನ ಮಸೂದೆಯಲ್ಲಿ ಹಲವಾರು ಲೋಪದೋಷಗಳಿವೆ. ದಶಕಗಳ ಲೋಪದೋಷಗಳನ್ನು ನಾವು ಸರಿಪಡಿಸಬೇಕಿದೆ. ಈ ಮಸೂದೆ ಸಂಬಂಧ ನಾವು ಮುಖ್ಯಮಂತ್ರಿಗಳನ್ನು ಸಂಪರ್ಕಿಸಿಲ್ಲ ಎಂದು ಹೇಳಿದವರು ಯಾರು ಎಂದು ವಿರೋಧ ಪಕ್ಷಗಳನ್ನು ಪ್ರಧಾನಿ ಪ್ರಶ್ನಿಸಿದರು.
ಮಸೂದೆಯಿಂದಾಗಿ ನಿಜವಾಗಿಯೂ ರೈತರಿಗೆ ತೊಂದರೆಯಾದಲ್ಲಿ ಭೂ ಸ್ವಾಧೀನ ಮಸೂದೆ ಬದಲಾವಣೆ ಮಾಡಲು ಸಿದ್ಧ ಎಂದು ಹೇಳಿದರು.