ಮಾಣೆಕ್ ಷಾ ಮೈದಾನಕ್ಕೆ ಬಿಗಿ ಭದ್ರತೆ

ಭಾರತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ಹಾಗೂ ಉಗ್ರರ ಕರಿ ನೆರಳಿನ ಹಿನ್ನೆಲೆಯಲ್ಲಿ ಕಬ್ಬನ್...
ಮಾಣೆಕ್ ಷಾ ಮೈದಾನಕ್ಕೆ ಬಿಗಿ ಭದ್ರತೆ
Updated on

ಬೆಂಗಳೂರು: ಭಾರತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ಹಾಗೂ ಉಗ್ರರ ಕರಿ ನೆರಳಿನ ಹಿನ್ನೆಲೆಯಲ್ಲಿ ಕಬ್ಬನ್ ರಸ್ತೆ ಮಾಣೆಕ್ ಷಾ ಕವಾಯತು ಮೈದಾನದಲ್ಲಿ ಸೋಮ ವಾರ ನಡೆಯುವ 66ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ನಗರ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಇತ್ತೀಚಿಗಿನ ಬಾಂಬ್ ಸ್ಪೋಟ ಹಾಗೂ ಉಗ್ರರ ಬಂಧನ, ಬೆದರಿಕೆಗಳ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಭದ್ರತೆ  ಕೈಗೊಳ್ಳಲಾಗಿದೆ. ಮೈದಾನ ಮತ್ತು ಇತರೆ ಕಡೆಗಳಲ್ಲಿ ಬಂದೋ ಬಸ್ತ್ ಕರ್ತವ್ಯಕ್ಕೆ 9 ಡಿಸಿಪಿ, 22 ಎಸಿಪಿ, 96 ಪಿಐ, 256 ಪಿಎಸ್‍ಐ, 14 ಮಹಿಳಾ ಪಿಎಸ್‍ಐ, 327 ಎಎಸ್‍ಐ, 850 ಹೆಡ್ ಕಾನ್ಸ್ ಟೇಬಲ್ ಗಳು, 1882 ಪೇದೆ, 128 ಮಹಿಳಾ ಸಿಬ್ಬಂದಿಯೊಂದಿಗೆ 150 ಮಫ್ತಿ  ಮತ್ತು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ, 37 ಕೆಎಸ್‍ಆರ್‍ಪಿ  ಮತ್ತು ಸಿಎಆರ್ ತುಕಡಿ, 2 ಕ್ಷಿಪ್ರ ಕಾರ್ಯ ಪಡೆ ಸೇರಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಅಲ್ಲದೇ 1 ಸಾವಿರ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶನಿವಾರ ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ ಅವರಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು.

ಮೈದಾನಕ್ಕೆ ಕಳೆದ 15 ದಿನಗಳಿಂದ ಶಸ್ತ್ರಾ ಸಜ್ಜಿತ
ಪೊಲೀಸರನ್ನು ನಿಯೋಜಿಸಲಾಗಿದ್ದು ಎಲ್ಲ ಹೋಟೆಲ್ ಲಾಡ್ಜ್, ತಂಗುದಾಣಗಳು ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅನುಮಾನಸ್ಪದ ವಾಗಿ ವಾಸ್ತವ್ಯ ಹೂಡಿರುವವರ ಮೇಲೆ ನಿಗಾ ವಹಿಸಲಾಗಿದೆ.

ಮೈದಾನದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ವೀಕ್ಷಣಾ ಗೋಪುರಗಳ ಮೇಲೆ ಶಸ್ತ್ರ ಸಜ್ಜಿತ ಪೊಲೀಸರು ಬೈನಾಕ್ಯುಲರ್‍ಗಳನ್ನು ಬಳಸಿ ಗಮನಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತದೆ.

ಇದೇ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ, ಜ.26 ಬೆಳಗ್ಗೆ  8.58ಕ್ಕೆ  ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದೇ ವೇಳೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್  ಮೇಲಿಂದ ಪುಷ್ಪ ವೃಷ್ಟಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಜ.22ರಿಂದ ನಡೆ ಯುತ್ತಿದೆ.4 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 2650 ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್ ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡ ಕವಾಯತು ಮತ್ತು ಬ್ಯಾಂಡ್‍ನ 55 ತುಕಡಿಗಳಲ್ಲಿ ಸುಮಾರು 1800 ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೈದಾನದ ಒಳಗೆ ಪ್ರವೇಶಿಸುವವರಿಗೆ

  • ಹಳದಿ ಕಾರ್ ಪಾಸ್‍ಗಳನ್ನು ಹೊಂದಿರುವ ಎಲ್ಲ ಆಹ್ವಾನಿತರು ಕಬ್ಬನ್ ರಸ್ತೆಯಲ್ಲಿ ಪ್ರವೇಶ ದ್ವಾರ-1.
  • ಬಿಳಿ ಕಾರ್ ಪಾಸ್‍ಗಳನ್ನು ಹೊಂದಿರುವವರು ಕಬ್ಬನ್ ರಸ್ತೆಯಲ್ಲಿ ದ್ವಾರ-2 ಮುಖಾಂತರ ಪ್ರವೇಶ. ಪಿಂಕ್ ಪಾಸ್‍ಗಳನ್ನು ಹೊಂದಿರುವ ಅಹ್ವಾನಿತರು ಪ್ರವೇಶದ್ವಾರ-3.
  • ಹಸಿರು ಬಣ್ಣದ ಪಾಸ್‍ಗಳನ್ನು ಹೊಂದಿರುವವರು ಕಾಮರಾಜ ರಸ್ತೆ ಮತ್ತು ಮೈನ್‍ಗಾರ್ಡ್ ರಸ್ತೆ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ಪ್ರವೇಶ ದ್ವಾರ 4 ಮತ್ತು 5ರ ಮೂಲಕ ಕಾಲ್ನಡಿಗೆಯಲ್ಲಿ ಪ್ರವೇಶಿಸಬೇಕು.
  • ಕವಾಯತಿನಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸುವ ವಿಧ್ಯಾರ್ಥಿಗಳನ್ನು ಕರೆತರುವ ವಾಹನಗಳು ಪ್ರವೇಶ ದ್ವಾರ-1ರ ಬಳಿ ನಿಲ್ಲಿಸಿ, ಮಕ್ಕಳನ್ನು ಇಳಿಸಿ ನಂತರ ತಮ್ಮ ವಾಹನಗಳನ್ನು ಎಂ.ಜಿ.ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೆ ರಸ್ತೆಯ ಉತ್ತರ  ಭಾಗದಲ್ಲಿ ಪಾರ್ಕಿಂಗ್.
  • ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆಯಲ್ಲಿ ನಿಲುಗಡೆ ಮಾಡಿ, ನಂತರ ಕಾಮರಾಜ ರಸ್ತೆಯಲ್ಲಿರುವ ಪ್ರವೇಶ ದ್ವಾರ 4, 5ರ ಮುಖಾಂತರ ಕಾಲ್ನಡಿಗೆಯಲ್ಲಿ ಒಳ ಪ್ರವೇಶಿಸಬಹುದಾಗಿದೆ.
  • ಕಾರ್ ಪಾಸ್ ಇಲ್ಲದವರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆ ಪಾರ್ಕಿಂಗ್‍ನಲ್ಲಿ ನಿಲ್ಲಿಸಿ, ಕಾಮರಾಜ ರಸ್ತೆಯಲ್ಲಿರುವ ಪ್ರವೇಶ ದ್ವಾರ 4, 5ರ ಮೂಲಕ ಕಾಲ್ನಡಿಗೆಯಲ್ಲಿ ಪ್ರವೇಶಿಸಬಹುದು.
  • ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ತಮ್ಮ ವಾಹನಗಳನ್ನು ಸಫೀನಾ ಪ್ಲಾಜಾ ಮುಂಭಾಗ ಮತ್ತು ಶಿವಾಜಿನಗರ ಬಿಎಂಟಿಸಿ ಸಂಕೀರ್ಣದ 2ನೇ ಮಹಡಿಯಲ್ಲಿ, ಶಿವಾಜಿನಗರದ ಛೋಟಾ ಮೈದಾನದಲ್ಲಿ, ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಿಲ್ಲಿಸಬಹುದು.

ನಿಷೇಧಿತ ವಸ್ತುಗಳನ್ನು ತರಬೇಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com