ಗ್ರಾಮೀಣ ವಸತಿ ಯೋಜನೆಗೆ ಶೇ.90 ಅನುದಾನ

ಗ್ರಾಮೀಣ ಭಾಗದ ಜನರಿಗೆ ವಸತಿ ಕಲ್ಪಿಸುವ ಇಂದಿರಾ ಆವಾಜ್ ಯೋಜನೆ(ಐಎವೈ)ಯನ್ನು ಬಲಿಷ್ಠಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗ್ರಾಮೀಣ ಭಾಗದ ಜನರಿಗೆ ವಸತಿ ಕಲ್ಪಿಸುವ ಇಂದಿರಾ ಆವಾಜ್ ಯೋಜನೆ(ಐಎವೈ)ಯನ್ನು ಬಲಿಷ್ಠಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರ, ಯೋಜನೆಯಡಿ ಗ್ರಾಮೀಣ ವಸತಿ ರಹಿತರ ಗೃಹ ನಿರ್ಮಾಣಕ್ಕೆ ಶೇ. 90ರಷ್ಟು ಅನುದಾನ ಕಲ್ಪಿಸಲು ತೀರ್ಮಾನಿಸಿದೆ.
`ಇಂದಿರಾ ಆವಾಜ್ ಯೋಜನೆ' (ಐಎವೈ)ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಈ ಕಾರ್ಯಕ್ರಮ ಇನ್ನು ಮುಂದೆ `ಗ್ರಾಮೀಣ ಆವಾಜ್ ಯೋಜನೆ' ಆಗಲಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಹೊಸ ರೂಪ ಕೊಡಲಿದೆ. ಪ್ರಸ್ತುತ ಐಎವೈ ಅಡಿ, ಗ್ರಾಮೀಣ ವಸತಿ ರಹಿತರು ಮನೆ ನಿರ್ಮಿಸಿಕೊಳ್ಳಲು ರು.70,000 ಅನುದಾನ ಪಡೆಯಬಹುದು. ಶೌಚಾಲಯ ಹೊಂದಲು ರು.8,000 ಅನುದಾನ ಲಭ್ಯವಿದೆ. ಆದರೆ, ಈ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ತೀರ್ಮಾನಿಸಿರುವ ಸರ್ಕಾರ, ಫಲಾನುಭವಿಗಳಿಗೆ ರು.1.48 ಲಕ್ಷ ಅನುದಾನ ನೀಡಲು ಮುಂದಾಗಿದೆ ಎಂದು ಸೋಮವಾರ ``ಹಿಂದುಸ್ತಾನ್ ಟೈಮ್ಸ್'' ವರದಿ ಮಾಡಿದೆ.
ಅಷ್ಟೇ ಅಲ್ಲ, ಯೋಜನೆಯ ಫಲಾನುಭವಿಗಳು ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಕಡಿಮೆ ಬಡ್ಡಿಯ ಸಾಲ ಮತ್ತು ಸರ್ಕಾರದ ಅನುದಾನದೊಂದಿಗೆ ಗ್ರಾಮೀಣ ಬಡವರು ತಮಗಿಷ್ಟದ ರೀತಿ ಮನೆಗಳನ್ನು ನಿರ್ಮಿಸಿಕೊಳ್ಳಬಹುದು. ಗ್ರಾಮೀಣ ವಸತಿಯೋಜನೆಯನ್ನು ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಆಂದೋಲನದ ಜತೆಗೆ ಸಂಯೋಜಿಸಲಾಗಿದೆ. ಅಲ್ಲದೆ, ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯೂ ಇದಕ್ಕೆ ಸಂಯೋಜನೆಗೊಂಡಿದ್ದು, ಈ ಮೂರು ಯೋಜನೆಗಳ ಸಮೀಕರಣದೊಂದಿಗೆ ಐಎವೈ ಹೊಸ ರೂಪ ಪಡೆದು ಕೊಳ್ಳುತ್ತಿದೆ.
ಸರ್ಕಾರದ ಈ ತೀರ್ಮಾನ ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ, ಗ್ರಾಮೀಣ ಬಡವರ ವಸತಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಒಟ್ಟು ಒಂದು ಲಕ್ಷ ರುಪಾಯಿವರೆಗೆ ಅನುದಾನ ದೊರೆಯಲಿದೆ. ಇದರ ಜತೆಗೆ, ಸ್ವಚ್ಛ ಭಾರತ ಆಂದೋನದ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ ರು.12,000 , ಮನ್ರೇಗಾ ಅಡಿಯಲ್ಲಿ ಕೂಲಿಗಳ ಉದ್ಯೋಗ ಭತ್ಯೆ ರೂಪದಲ್ಲಿ ರು.16,000 ಮತ್ತು ಕಡಿಮೆ ಬಡ್ಡಿ ದರದಲ್ಲಿ ರು.20,000 ಗಳ ವರೆಗೆ ಸಾಲ ದೊರೆಯಲಿದೆ. `ಮನೆ ಹೊಂದಲು ಗ್ರಾಮೀಣರಿಗೆ ಕೇಂದ್ರ ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಿದೆ. ಫಲಾನುಭವಿಯೊಬ್ಬರು ಈ ಯೋಜನೆಯಡಿ ರು.20,000 ಸಾಲ ಪಡೆಯಲು ಅವಕಾಶವಿದೆ. ಸಾಲದ ಮರುಪಾವತಿಯನ್ನೂ ಸರಳೀಕರಿಸಲಾಗಿದೆ. ಏಳು ವರ್ಷಗಳ ಕಾಲ ಮಾಸಿಕ ರು.269 ರಂತೆ ಪಾವತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com