
ಭೂಪಾಲ್: ವ್ಯಾಪಂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ನಮ್ರತಾ ದಾಮೋರ್ ಅವರದ್ದು ಸಹಜ ಸಾವಲ್ಲ, ಕೊಲೆಯೆಂದು ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ವ್ಯಾಪಂ ಹಗರಣ ಪ್ರಕರಣವು ದೇಶದಾದ್ಯಂತ ಸುದ್ದಿ ಮಾಡುತ್ತಿದ್ದು, ಪ್ರಕರಣ ಸಂಬಂಧ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ವ್ಯಾಪಂ ಹಗರಣದಲ್ಲಿ ಭಾಗಿಯಾಗಿ ನಮ್ರತಾ ದಾಮೋರ್ ಎಂಬ ವಿದ್ಯಾರ್ಥಿನಿ 2009 ರಲ್ಲಿ ಮೆಡಿಕಲ್ ಸೀಟ್ ಪಡೆದುಕೊಂಡಿದ್ದಳು ಎಂದು ಹೇಳಲಾಗುತ್ತಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದ್ಯಾರ್ಥಿಯ ಶವ 2012 ರಲ್ಲಿ ಉಜ್ಜಯನಿಯ ರೈಲ್ವೆ ಟ್ರ್ಯಾಕ್ ಬಳಿ ಸಿಕ್ಕಿತ್ತು.
ಪ್ರಕರಣ ಸಂಬಂಧ ಜು.8 ರಂದು ನಮ್ರತಾ ದಾಮೋರ್ ಅವರ ಶವಪರೀಕ್ಷೆ ಮಾಡಿದ ವೈದ್ಯರೊಬ್ಬರು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿ, ವೈದ್ಯ ವೃತ್ತಿಯಲ್ಲಿ ನನಗೆ 25 ವರ್ಷವಾಗಿದೆ. ನಮ್ರತಾ ಅವರದ್ದು ಆತ್ಮಹತ್ಯೆ ಎಂದು ನೋಡಿದ ಕೂಡಲೇ ಹೇಳುವಂತಿತ್ತು. ನಮ್ರತಾ ಅವರದ್ದು ಕೊಲೆಯಲ್ಲ ಎಂದು ಹೇಳಲು ಕನಿಷ್ಟ ಪಕ್ಷ ಶೇ.1 ರಷ್ಟು ದಾಖಲೆಯೂ ಇಲ್ಲ. ದಾಮೋರ್ ಅವರ ಶವ ಆಸ್ಪತ್ರೆಗೆ ಬಂದಾಗ ಮೂವರು ವೈದ್ಯರು ಶವವನ್ನು ಪೋಸ್ಟ್ ಮಾರ್ಟಮ್ ಮಾಡಿದ್ದೆವು. ಈ ವೇಳೆ ನಮ್ರತಾ ದಾಮೋರ್ ಅವರ ಬಾಯಿ, ಮೂಗು, ಕತ್ತು ಹಾಗೂ ದೇಹದ ಕೆಲವು ಭಾಗಗಳ ಮೇಲೆ ಮೂಗೇಟುಗಳಿದ್ದದ್ದು ಕಂಡಿಬಂದಿತ್ತು. ದಾಮೋರ್ ಅವರನ್ನು ಕತ್ತು ಹಿಸುಕು ಹತ್ಯೆ ಮಾಡಿ ನಂತರ ಅವರನ್ನು ಎಳೆದುಕೊಂಡು ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಹಾಕಿರುವುದನ್ನು ನೋಡಿದ ತಕ್ಷಣ ಹೇಳುವಂತಿತ್ತು. ಮರಣೋತ್ತರ ಪರೀಕ್ಷೆ ನಂತರ ವರದಿಯಲ್ಲಿ ಆತ್ಮಹತ್ಯೆ ಎಂದು ಎಲ್ಲಿಯೂ ನಾವು ನಮೂದಿಸಿಲ್ಲ ಎಂದು ಹೇಳಿದ್ದರು.
ನಮ್ರತಾ ದಾಮೋರ್ ಅವರ ಸಾವಿನ ಸುತ್ತ ಹಲವು ಅನುಮಾನಗಳು ಸುತ್ತಿಕೊಂಡಿದ್ದರು, ಅಲ್ಲಿನ ಅಧಿಕಾರಿಗಳು ಮಾತ್ರ ನಮ್ರತಾಳದ್ದು ಆತ್ಮಹತ್ಯೆಯೇ ಎಂದು ತಮ್ಮ ವಾದ ಮಂಡಿಸಿದ್ದರು. ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದು, ಇದೀಗ ನಮ್ರತಾ ದಾಮೋರ್ ಅವರ ಸಾವು ಕೊಲೆಯೆಂದು ದಾಖಲಿಸಿಕೊಂಡಿದೆ. ಅಲ್ಲದೆ, ಪ್ರಕರಣ ಸಂಬಂಧದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ ಎಂದು ಹೇಳಲಾಗುತ್ತಿದೆ.
Advertisement