ಅಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ ನಾಲಿಗೆ ಕತ್ತರಿಸುತ್ತೇವೆ: ಪಿ.ಆರ್.ಸುಂದರಂ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ಆರೋಗ್ಯದ ಬಗ್ಗೆ ಮಾತನಾಡುವವರ ನಾಲಿಗೆ ಕತ್ತರಿಸುತ್ತೇವೆ ಎಂದು ಎಐಡಿಎಂಕೆ ಸದಸ್ಯ ಪಿ.ಆರ್ ಸುಂದರಂ ಭಾನುವಾರ ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರು ಅನಾರೋಗ್ಯದ ಕಾರಣದಿಂದಾಗಿ 10 ದಿನಗಳ ಕಾಲ ಕೆಲಸಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ವಿರೋಧ ಪಕ್ಷಗಳು ಹಲವು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ಜಯಲಲಿತ ಅನಾರೋಗ್ಯದ ಕುರಿತಂತೆ ಮಾತನಾಡಿದ್ದ ಕರುಣಾನಿಧಿ ಅವರು, ಜಯಲಲಿತ ಅವರಿಗೆ ಅನಾರೋಗ್ಯವಿದ್ದರೆ ಅಧಿಕಾರದಿಂದ ಕೆಳಗಿಳಿಯಲಿ ಎಂದು ಹೇಳಿದ್ದರು.
ಪ್ರತಿಪಕ್ಷಗಳ ಟೀಕೆ ವಿರುದ್ಧ ನಿನ್ನೆ ತಮಿಳುನಾಡಿನ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಿ.ಆರ್ ಸುಂದರಂ ಅವರು, ಅಮ್ಮ ಅವರ ಆರೋಗ್ಯ ಕುರಿತಂತೆ ಯಾರಾದರೂ ವಿರೋಧ ರೀತಿಯ ಹೇಳಿಕೆ ನೀಡಿದರೆ ನನ್ನ ಕೋಪವನ್ನು ನಿಯಂತ್ರಿಸಿಕೊಳ್ಳಲಾಗುವುದಿಲ್ಲ. ಅವರ ನಾಲಿಗೆ ಕತ್ತರಿಸಿ ಬಿಡಬೇಕು ಎನಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕರುಣಾನಿಧಿ ವಿರುದ್ಧ ಕಿಡಿಕಾರಿರುವ ಅವರು, ಜಯಲಲಿತರಿಗೆ ಅನಾರೋಗ್ಯವಿದ್ದರೆ ಅಧಿಕಾರದಿಂದ ಕೆಳಗಿಳಿದು, ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಹೇಳಿರುವ ಕರುಣಾನಿಧಿ ಅವರಿಗೆ ಈಗ ಎಷ್ಟು ವಯಸ್ಸಾಗಿದೆ. ಕರುಣಾನಿಧಿಗೆ ಈಗಾಗಲೇ 93 ವರ್ಷ ವಯಸ್ಸಾಗಿದೆ. ಅವರಿಗೆ ಇನ್ನು 100 ವರ್ಷ ಬದುಕಬೇಕೆಂಬ ಆಸೆಯಿದೆ ಎನ್ನುತ್ತಾರೆ. ಇಷ್ಟು ವಯಸ್ಸಾದರೂ ಈಗಲೂ ತಮ್ಮ ಅಧಿಕಾರವನ್ನು ಮಗನಿಗೆ ನೀಡಲು ಹಿಂದೂಮುಂದು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ