ಶ್ರೀನಗರ: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ಸಿಟಿಯ ಮಧ್ಯಭಾಗದಲ್ಲಿರುವ ಏರ್ ಸೆಲ್ ಮತ್ತು ವೊಡಾಫೋನ್ ಮೊಬೈಲ್ ಕಂಪೆನಿ ಶೋರೂಂ ಮೇಲೆ ಶಂಕಿತ ಉಗ್ರರು ಶುಕ್ರವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಕೆಲವೇ ನಿಮಿಷಗಳ ಅಂತರದಲ್ಲಿ ಈ ದಾಳಿ ನಡೆದಿದ್ದು, ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ.
ಇಬ್ಬರು ಅಪರಿಚಿತ ಯುವಕರು ಇಂದು ಬೆಳಗ್ಗೆ 11.30ರ ಸುಮಾರಿಗೆ ಶ್ರೀನಗರದ ಕರಣ್ ನಗರದಲ್ಲಿರುವ ಏರ್ ಸೆಲ್ ಕಚೇರಿಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಹೊರಗೆ ಹೋಗುವಂತೆ ಸೂಚಿಸಿದರು. ಕಂಪೆನಿಯ ಆವರಣದೊಳಗೆ ಗ್ರೆನೇಡ್ ಎಸೆದು ಅಲ್ಲಿಂದ ಓಡಿ ಹೋಗಿದ್ದಾರೆ.ನಂತರ ಅಲ್ಲಿಂದ 500 ಮೀಟರ್ ದೂರದಲ್ಲಿರುವ ವೊಡಫೋನ್ ಶೋರೂಂನ ಮೇಲೆಯೂ ಯುವಕರು ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರಗಾಮಿಗಳು ಕಳೆದ ಮೇ ತಿಂಗಳಿನಲ್ಲಿ ಉತ್ತರ ಕಾಶ್ಮೀರದ ಸೊಪೊರೆ ಪಟ್ಟಣದಲ್ಲಿ ಮತ್ತು ಪಟ್ಟನ್ ಎಂಬಲ್ಲಿ ಮೊಬೈಲ್ ಕಂಪೆನಿಗಳ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು.
Advertisement