ಕಲಾಂಗೆ ಉದ್ಯಮ ಕಂಬನಿ
ನವದೆಹಲಿ: ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನಕ್ಕೆ ದೇಶದ ಉದ್ಯಮ ಕಂಬನಿ ಮಿಡಿದಿದೆ. ಕಲಾಂ ದಾರ್ಶನಿಕ ಮತ್ತು ಪ್ರವರ್ತಕರಾಗಿದ್ದರು. ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. ಕಲಾಂ ಭಾರತ ಮತ್ತು ಭಾರತೀಯ ಉದ್ಯಮಕ್ಕೆ ದೊಡ್ಡ ಪ್ರೇರಕ ಶಕ್ತಿ, ಸ್ಫೂರ್ತಿ ಮತ್ತು ಆದ್ಯ ಪ್ರವಚನಕಾರರಾಗಿದ್ದರು. ಭಾರತ ಶ್ರೇಷ್ಠ ಮಟ್ಟಕ್ಕೆ ಬೆಳೆಯಬೇಕಾದರೆ ತಾಂತ್ರಿಕವಾಗಿ ಅಭಿವೃದ್ಧಿ ಕಾಣಬೇಕೆಂಬ ಅವರ ಮುನ್ನೋಟ ಉದ್ಯಮ ಸ್ಪರ್ಧಾತ್ಮಕತೆಗಾಗಿ ಹೆಚ್ಚು ಹೆಚ್ಚು ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರೇರೇಪಿಸಿತು ಎಂದು ಭಾರತೀಯ ಉದ್ಯಮ ಒಕ್ಕೂಟ (ಸಿಐಐ) ಅಧ್ಯಕ್ಷರಾದ ಸುಮಿತ್ ಮಜುಂದಾರ್ ಹೇಳಿದ್ದಾರೆ.
ಕಲಾಂ ನಿಧನ ದೊಡ್ಡ ನಿರ್ವಾತವನ್ನು ಸೃಷ್ಟಿಸಿದ್ದು ಅದನ್ನು ತುಂಬಲು ಸಾಧ್ಯವೇ ಇಲ್ಲ ಎಂದು ಪಿಎಚ್ಡಿ ಚೇಂಬರ್ ಅಧ್ಯಕ್ಷರಾದ ಅಲೋಕ್ ಬಿ ಶ್ರೀರಾಂ ಹೇಳಿದ್ದಾರೆ. ರಾಷ್ಟ್ರಪತಿಗಳಾಗಿ ಕಲಾಂ ಹೆಚ್ಚು ಜನಪ್ರಿಯರಾದರು. ಭಾರತದ ಉದ್ಯಮ ಒಕ್ಕೂಟ ಸೇರಿದಂತೆ ಎಲ್ಲ ವರ್ಗಗಳು ಅವರನ್ನು ಇಷ್ಟಪಟ್ಟಿದ್ದವು. ಅವರು ನಿರಂತರವಾಗಿ ತಮ್ಮ ಆರ್ಥಿಕ ಮುನ್ನೋಟಗಳನ್ನು ಹಂಚಿಕೊಳ್ಳುತ್ತಿದ್ದರು. ಮಹೀಂದ್ರ ಗ್ರೂಪ್ ಸಿಎಂಡಿ ಆನಂದ್ ಮಹೀಂದ್ರ ಕಲಾಂ ಜೊತೆಗಿನ ಕ್ಷಣಗಳನ್ನು ಸ್ಮರಿಸಿದ್ದು, ಚೆನ್ನೈನಲ್ಲಿ ಕಂಪನಿ ಘಟಕವನ್ನು ಉದ್ಘಾಟಿಸುವಾಗ ಯಾವಾಗಲೂ ಎತ್ತರದ ಕಡೆ ನೋಟ ಹರಿಸಬೇಕು ಮತ್ತು ತಮ್ಮ ಒರಿಜಿನಲ್ ಐಡಿಯಾಗಳ ಆಚೆಗೆ ಚಿಂತಿಸಬೇಕೆಂದು ಹೇಳಿದ್ದರು ಎಂದಿದ್ದಾರೆ.
ಅಸೋಚಾಮ್ ಅಧ್ಯಕ್ಷ ರಾಣಾ ಕಪೂರ್, ಎಂಜಿನಿಯರ್ಗಳ ಒಕ್ಕೂಟ, ಎಲ್ ಅಂಡ್ಟಿ ಕಾರ್ಯನಿರ್ವಾಹಕ ಚೇರ್ಮನ್ ಎ.ಎಂ.ನಾಯಕ್, ಜಿವಿಕೆ ಇಎಂಆರ್ಐ ಮತ್ತಿತರ ಕಂಪನಿಗಳು ಕಲಾಂ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿವೆ.