ಚೆನ್ನೈ: ಬದುಕಿನುದ್ದಕ್ಕೂ ಅನೇಕ ಪ್ರತಿಭಟನೆಗಳು, ನಿರಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಗಾಂಧಿವಾದಿ ಸಸಿ ಪೆರುಮಾಳ್(59) ಶುಕ್ರವಾರ ಮದ್ಯದಂಗಡಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಅಸುನೀಗಿದ್ದಾರೆ.
ಗುರುವಾರ ರಾಮೇಶ್ವರದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಪೆರುಮಾಳ್, ಪ್ರತಿಭಟನೆಯಲ್ಲಿ ಭಾಗವಹಿಸುವ ಸಲುವಾಗಿಯೇ ಕನ್ಯಾಕುಮಾರಿಯ ಮಾರ್ಥಂಡ್ರಮ್ ಗೆ ಆಗಮಿಸಿದ್ದರು. ರಾಜ್ಯಾದ್ಯಂತ ಮದ್ಯ ನಿಷೇಧ ಮಾಡಬೇಕೆಂಬುದು ಅವರ ಆಗ್ರಹವಾಗಿತ್ತು.
ಶುಕ್ರವಾರ ಬೆಳಗ್ಗೆ ಮೊಬೈಲ್ ಫೋನ್ ಟವರ್ ಮೇಲೆ ಹತ್ತಿದ ಪೆರುಮಾಳ್, ಮದ್ಯ ನಿಷೇಧ ಜಾರಿಯಾಗದಿದ್ದರೆ ಮೇಲಿಂದ ಹಾರಿ ಪ್ರಾಣಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹಲವು ಗಂಟೆಗಳ ಕಾಲ ಅವರನ್ನು ಮನವೊಲಿಸುವ ಪ್ರಯತ್ನ ನಡೆಯಿತಾದರೂ ಅವರು ಪಟ್ಟು ಬಿಡಲಿಲ್ಲ. ಕೊನೆಗೆಜಿಲ್ಲಾಡಳಿತವುಮದ್ಯದಂಗಡಿಗಳ ಮೇಲೆ ನಿಷೇಧ ಹೇರುವುದಾಗಿ ಭರವಸೆ ನೀಡಿತು. ನಂತರ ಅಗ್ನಿ ಶಾಮಕ ಸಿಬ್ಬಂದಿಯು ಪೆರುಮಾಳ್ ರನ್ನು ಕೆಳಗೆ ಕರೆತರಲೆಂದು ಟವರ್ ಮೇಲೆ ಹತ್ತಿದರು.
ಆದರೆ, ಅಷ್ಟರಲ್ಲಾ ಗಲೇ ಟವರ್ ನಲ್ಲೇ ಪೆರುಮಾಳ್ ಪ್ರಜ್ಞೆ ತಪ್ಪಿ ಬಿದ್ದಿದ್ದರಲ್ಲದೇ ಎದೆಯಲ್ಲಿ ರಕ್ತ ಚಿಮ್ಮಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement