ನವದೆಹಲಿ: ವೇತನ ಪಾವತಿಗೆ ಆಗ್ರಹಿಸಿ ದೆಹಲಿ ನೈರ್ಮಲ್ಯ ಕಾರ್ಮಿಕರು ದೆಹಲಿಯಲ್ಲಿ ಪ್ರತಿಭಟನೆ ಕುಳಿತಿದ್ದೇ ತಡ, ಆಪ್ ಮತ್ತು ಬಿಜೆಪಿ ನಾಯಕರೆಲ್ಲರೂ ಪೊರಕೆ ಹಿಡಿದು
ಬೀದಿಗಿಳಿದಿದ್ದಾರೆ. ಶನಿವಾರ ಎರಡೂ ಪಕ್ಷಗಳು ದೆಹಲಿಯಲ್ಲಿ `ಸ್ವಚ್ಛ ರಾಜಕೀಯ'
ಆರಂಭಿಸಿವೆ. ಅಷ್ಟೇ ಅಲ್ಲ, ಕಸದ ಸಮಸ್ಯೆ ಬಗ್ಗೆ ಪರಸ್ಪರರ ಮೇಲೆ ಗೂಬೆ ಕೂರಿಸಿವೆ.
ಪೌರಕಾರ್ಮಿಕರ ಪ್ರತಿಭಟನೆಯ ಮಾರನೇ ದಿನವೇ ಎಚ್ಚರಗೊಂಡ ಆಪ್ ನಾಯಕರು ದೆಹಲಿ ಬೀದಿಗಳನ್ನು ಸ್ವಚ್ಛಗೊಳಿಸಲು ಆರಂಭಿಸಿದರು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಅಶುತೋಷ್, ಅಲ್ಕಾ ಲಾಂಬಾ ಮತ್ತಿತರ ಆಪ್ ನಾಯಕರು ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ ಕೈಗೊಂಡರು. ``ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ ನಾವೆಲ್ಲವೂ ಜತೆಯಾಗಿದ್ದೆವು. ಈಗ ಎಲ್ಲ ಮಹಾನಗರ ಪಾಲಿಕೆಗಳ ಮೇಯರ್ಗಳು ದೆಹಲಿಯ ಜನ ಸಮಸ್ಯೆ ಅನುಭವಿಸದಂತೆ ನೋಡಿಕೊಳ್ಳಬೇಕು'' ಎಂದು ಆಪ್ ನಾಯಕ ಸಂಜಯ್ ಸಿಂಗ್ ಕರೆ ನೀಡಿದರು.
ಆಪ್ ಸ್ವಚ್ಛತೆ ಆರಂಭವಾಗುತ್ತಿದ್ದಂತೆ ಬಿಜೆಪಿ ದೆಹಲಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ
ಅವರೂ ಕೆಲ ಕಾರ್ಯಕರ್ತರೊಂದಿಗೆ ಸೇರಿ ಬೀದಿ ಸ್ವಚ್ಛಗೊಳಿಸಲು ಶುರುಮಾಡಿದ್ದಲ್ಲದೆ,
ಕೇಜ್ರಿವಾಲ್ ವಿರುದ್ಧ ಹರಿಹಾಯ್ದರು. ಈ ನಡುವೆ ಬಂದ ಕಾಂಗ್ರೆಸ್, ಕಸದ ಸಮಸ್ಯೆಗೆ
ಆಪ್ ಮತ್ತು ಬಿಜೆಪಿ ಎರಡೂ ಕಾರಣ ಎಂದಿತು.
Advertisement