ಲೆಸ್ಲಿ ಉಡ್ವಿನ್
ಲೆಸ್ಲಿ ಉಡ್ವಿನ್

ಅಪರಾಧಿಯ ಸೃಷ್ಟಿಸಿದ್ದೇ ಸಮಾಜ: ಲೆಸ್ಲಿ ಉಡ್ವಿನ್

Published on

ನವದೆಹಲಿ: 'ದೆಹಲಿ ಗ್ಯಾಂಗ್‍ರೇಪ್ ಅಪರಾಧಿಯನ್ನು ಹುಟ್ಟಿಸಿದ್ದೇ ನಮ್ಮ ಸಮಾಜ. ಇಲ್ಲಿ ಅಪರಾಧಿಯಾಗಿದ್ದು ಕೇವಲ ಅತ್ಯಾಚಾರಿಗಳಲ್ಲ, ಇಡೀ ಸಮಾಜ. ಅತ್ಯಾಚಾರಿಗಳು ಏನನ್ನು ಯೋಚಿಸಬೇಕು ಎನ್ನುವುದನ್ನು ಕಲಿಸಿಕೊಟ್ಟಿದ್ದು, ಅವರಿಗೆ ಉತ್ತೇಜನ ನೀಡಿದ್ದೂ ಸಮಾಜವೇ'.

ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ, ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್. ಇಂಡಿಯಾ ಇನ್ ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಉಡ್ವಿನ್ ಸಾಕ್ಷ್ಯಚಿತ್ರಕ್ಕೆ ಸಿಕ್ಕಿದ ಪ್ರೇರಣೆ ಬಗ್ಗೆ, ಅದರ ವಿವಾದದ ಬಗ್ಗೆ ಮಾತನಾಡಿದ್ದಾರೆ. `ಈ ಸಾಕ್ಷ್ಯಚಿತ್ರವು ನನ್ನ ವೃತ್ತಿಜೀವನದಲ್ಲಿ ನಾನು ಎದುರಿಸಿದ ಅತಿದೊಡ್ಡ ಸವಾಲು. ನನ್ನ ಈ ಚಿತ್ರಕ್ಕೆ ಪ್ರೇರಣೆ ದೆಹಲಿಯಲ್ಲಾದ ಅತ್ಯಾಚಾರ ಪ್ರಕರಣವಲ್ಲ, ಬದಲಿಗೆ ಅದರ ನಂತರ ನಡೆದ ಸರಣಿ ಪ್ರತಿಭಟನೆಗಳು, ಯುವಜನರ ಕ್ರಾಂತಿ' ಎಂದೂ ಹೇಳಿದ್ದಾರೆ ಉಡ್ವಿನ್.

ಪ್ರಗತಿಗೆ ಗ್ರಹಿಕೆ ಮುಖ್ಯ: ಅಪರಾಧಿಯ ಅಭಿಪ್ರಾಯ ಪ್ರಸಾರ ಮಾಡುವ ಮೂಲಕ ಆತನನ್ನು ವೈಭವೀಕರಿಸಲಾಗಿದೆ ಎಂಬ ವಾದವನ್ನು ಒಪ್ಪದ ಉಡ್ವಿನ್, ಇದೊಂದು ಮೂರ್ಖತನದ, ತರ್ಕಹೀನ ಅಭಿಪ್ರಾಯ ಎಂದಿದ್ದಾರೆ. ಯಾವುದೇ ವಿಚಾರದಲ್ಲಿ ಪ್ರಗತಿ ಸಾಧಿಸಬೇಕೆಂದರೆ ಮೊದಲು ಅದನ್ನು ಅರ್ಥಮಾಡಿಕೊಳ್ಳಬೇಕು. ಆ ಪ್ರಯತ್ನವನ್ನು ನಾನು ಮಾಡಿದ್ದೇನೆ' ಎಂದಿದ್ದಾರೆ.

'ಆ ಅಪರಾಧಿಗಳು ಮಹಿಳೆಯರ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಅಂತಹ ಅಭಿಪ್ರಾಯ ಬಂದಿದ್ದಾದರೂ ಎಲ್ಲಿಂದ? ಶೇ.20ರಷ್ಟು ಮಹಿಳೆಯರು ಮಾತ್ರವೇ ಸಭ್ಯರು ಎಂಬುದನ್ನು ಅವರಿಗೆ ಕಲಿಸಿಕೊಟ್ಟವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದನ್ನೇ ನಾನು ಸಮಾಜ ಎಂದಿದ್ದು' ಎಂದು ಹೇಳಿದ್ದಾರೆ ಉಡ್ವಿನ್.

ಇದೇ ವೇಳೆ, ಬಾಲಿವುಡ್ ಸಿನಿಮಾಗಳು ನೀಲಿಚಿತ್ರಗಳಾಗಿ ಬದಲಾಗುತ್ತಿವೆ. ಇಲ್ಲಿ ಮಹಿಳೆಯರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗುತ್ತಿದೆ. ಇವೆಲ್ಲವೂ ಈ ಸಂಸ್ಕೃತಿಯ, ಕೆಟ್ಟ ರೋಗದ ಭಾಗ ಎಂದೂ ಹೇಳಿದ್ದಾರೆ.

ಆದೇಶ ಉಲ್ಲಂಘನೆ
ಉಡ್ವಿನ್‍ಗೆ ತಿಹಾರ್ ಜೈಲಿನೊಳಗೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವ ಸಂದರ್ಭದಲ್ಲಿ ಭಾರತ ಸರ್ಕಾರ ತನ್ನದೇ ಆದೇಶವನ್ನು ಉಲ್ಲಂಘಿಸಿತ್ತು ಎಂಬ ವಿಚಾರ ಈಗ ಬಹಿರಂಗವಾಗಿದೆ. ಭಾರತೀಯ ಜೈಲುಗಳಿಗೆ ಭೇಟಿ ನೀಡುವ ವಿದೇಶಿಯರ ಹಿನ್ನೆಲೆ ಬಗ್ಗೆ ಅರಿತುಕೊಳ್ಳಬೇಕಾದ್ದು ಕಡ್ಡಾಯ ಎಂದು ಸ್ವತಃ ಸರ್ಕಾರವೇ 2012ರಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತ್ತು.

ಜೈಲಿನ ಆವರಣದೊಳಕ್ಕೆ ಭೇಟಿ ನೀಡ ಬಯಸುವ, ಅದಕ್ಕಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವಿದೇಶೀಯನ ಹಿನ್ನೆಲೆಯನ್ನು ಅರಿತುಕೊಳ್ಳಬೇಕು ಎಂದು ಈ ಮಾರ್ಗದರ್ಶಿಯಲ್ಲಿ ತಿಳಿಸಲಾಗಿತ್ತು. ಆದರೆ, ತಿಹಾರ್ ಜೈಲು ಅಧಿಕಾರಿಗಳೇ ಆಗಲೀ, ಕೇಂದ್ರ ಗೃಹ ಸಚಿವಾಲಯವೇ ಆಗಲಿ, ಉಡ್ವಿನ್ ಅವರ ಭೇಟಿಗೆ ಅವಕಾಶ ನೀಡುವ ವೇಳೆ ಈ ನಿಯಮ ಪಾಲಿಸಿರಲಿಲ್ಲ. ಅಷ್ಟೇ ಅಲ್ಲ, ಈ ರೀತಿಯ ಸಂದರ್ಶನದ ವೇಳೆ ಅಪರಾಧಿ ಜೈಲಿನ ಸಮವಸ್ತ್ರ ಧರಿಸುವುದು ಕೂಡ ಕಡ್ಡಾಯ. ಆದರೆ ಕೂಡ ಜೈಲಿನ ನಿಯಮ ಉಲ್ಲಂಘಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com