ಇಂದೋರ್: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ತಮ್ಮ ಅಸಂತೋಷವನ್ನು ಹೊರಹಾಕಿರುವ ಬಿಜೆಪಿ ಶಾಸಕಿಯೊಬ್ಬರು ಅತ್ಯಾಚಾರಿಗಳನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.
ನಾಗಾಲ್ಯಾಂಡ್ ನ ದೀಮಾಪುರ ಜೈಲಿನಿಂದ ಉದ್ರಿಕ್ತರ ಗುಂಪು ಅತ್ಯಾಚಾರಿಯನ್ನು ಹೊರಗೆಳೆದು ತಂದು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಬಳಿಕ ಥಳಿಸಿ ಹತ್ಯೆ ಮಾಡಿರುವ ಕೃತ್ಯವನ್ನು ಮಧ್ಯ ಪ್ರದೇಶದ ಇಂದೋರ್ ಶಾಸಕಿ ಉಷಾ ಠಾಕೂರ್ ಸಮರ್ಥಿಸಿಕೊಂಡಿದ್ದಾರೆ.
ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರು ಪ್ರಾಣಿಗಳಿಗಿಂತಲೂ ಕೀಳು. ಇಂತವರಿಗೆ ಬಹಿರಂಗ ನೇಣಿಗೇರಿಸುವುದೇ ಸೂಕ್ತ ಎಂದರಲ್ಲದೇ ಈ ಕುರಿತು ಕಾನೂನು ಮಾರ್ಪಾಡು ಮಾಡಬೇಕೆಂದು ಆಗ್ರಹಿಸಿದರು.
ಅತ್ಯಾಚಾರ ನಡೆಸುವ ಮೂಲಕ ಮತ್ತೊಬ್ಬರ ಜೀವನವನ್ನು ಹಾಳು ಮಾಡುವ ಇಂತವರಿಗೆ ಬದುಕುವ ಹಕ್ಕಿಲ್ಲವೆಂದು ಹೇಳಿದ ಉಷಾ ಠಾಕೂರ್, ಇಂತಹ ಪ್ರಕರಣಗಳಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯಗಳು ಗಲ್ಲಿನಂತಹ ಕಠಿಣ ಶಿಕ್ಷೆ ವಿಧಿಸಿದರೆ ಇತರರಿಗೂ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.
Advertisement