ದಪ್ಪಗಾದ ಸಲ್ಮಾನ್ ಗೆ ಊಟ ಹಾಕಲಾಗದೆ ಕೇರಳಕ್ಕೆ ರವಾನೆ..!

ಸಲ್ಮಾನ್ ದಪ್ಪಗಾಗಿದ್ದು, ಆತನ ಪೋಷಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆತನನ್ನು ಕೇರಳಕ್ಕೆ ರವಾನಿಸಲಾಗುತ್ತಿದೆ..!...
ದೆಹಲಿ ಮೃಗಾಲಯದಲ್ಲಿರುವ ಗಂಡು ಚಿರತೆ ಸಲ್ಮಾನ್
ದೆಹಲಿ ಮೃಗಾಲಯದಲ್ಲಿರುವ ಗಂಡು ಚಿರತೆ ಸಲ್ಮಾನ್
Updated on

ನವದೆಹಲಿ: ಸಲ್ಮಾನ್ ದಪ್ಪಗಾಗಿದ್ದು, ಆತನ ಪೋಷಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆತನನ್ನು ಕೇರಳಕ್ಕೆ ರವಾನಿಸಲಾಗುತ್ತಿದೆ..!

ಅರೆರೇ ಇದೇನಿದು..ಸಲ್ಮಾನ್ ಖಾನ್ ದಪ್ಪಗಾದ್ರಾ..ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ 9ನ ಆರಂಭಿಕ ಕಾರ್ಯಕ್ರಮದಲ್ಲಿ ನೋಡಿದ್ವಿ. ಅಷ್ಟು ಬೇಗ ದಪ್ಪಗಾದ್ರಾ ಎಂದು ಕೇಳಬೇಡಿ...ನಾವು ಹೇಳ್ತಾ ಇರೋದು ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆಯಲ್ಲ. ದೆಹಲಿ ಮೃಗಾಲಯದಲ್ಲಿರುವ ಸಲ್ಮಾನ್ ಎಂಬ 12 ವರ್ಷದ ಚಿರತೆಯ ಬಗ್ಗೆ.

ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ವನ್ಯಮೃಗಧಾಮದಲ್ಲಿರುವ 12 ವರ್ಷದ ಗಂಡು ಚಿರತೆ ಸಲ್ಮಾನ್ ತಿಂದು-ತಿಂದು ದಪ್ಪಗಾಗಿದ್ದು, ಆತನ ಪೋಷಣೆ ಸಾಧ್ಯವಿಲ್ಲ ಎಂದು ದೆಹಲಿ ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಆತನನ್ನು ಶೀಘ್ರದಲ್ಲಿಯೇ ಆತನ ಹುಟ್ಟೂರಾದ ಕೇರಳದ ತಿರುವನಂತಪುರಕ್ಕೆ ಮರಳಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಈಗ್ಗೆ ವರ್ಷದ ಹಿಂದೆ ದೆಹಲಿ ಮೃಗಾಲಯದಲ್ಲಿ ಒಂಟಿಯಾಗಿದ್ದ ಹೆಣ್ಣು ಚಿರತೆಯೊಂದಕ್ಕೆ ಜೋಡಿ ಹುಡುಕುತ್ತಿದ್ದ ಅಧಿಕಾರಿಗಳಿಗೆ ತಿರುವನಂತಪುರ ಮೃಗಾಲಯದಲ್ಲಿದ್ದ ಈ ಸಲ್ಮಾನ್ ಕಣ್ಣಿಗೆ ಬಿದ್ದಿದ್ದ. ಪರಸ್ಪರ ಒಪ್ಪಂದದ ಮೇರೆಗೆ ಅಧಿಕಾರಿಗಳು ಗಂಡು ಚಿರತೆ ಸಲ್ಮಾನ್ ನನ್ನು ದೆಹಲಿಗೆ ಕರೆತಂದಿದ್ದರು. ಹೆಣ್ಣು ಚಿರತೆಯೊಂದಿಗೆ ಕೂಡಬೇಕಿದ್ದ ಸಲ್ಮಾನ್ ಅದೇಕೋ ಊಟದ ಮೇಲೆಯೇ ತನ್ನ ಗಮನನ್ನೆಟ್ಟಿದ್ದ. ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟರಾದರೂ, ಹೆಣ್ಣು ಚಿರತೆಗೆ ಸಲ್ಮಾನ್ ನನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪರಿಣಾಮ ಕೇವಲ 12 ತಿಂಗಳಲ್ಲಿ ಆತನ ತೂಕ ದುಪ್ಪಟ್ಟಾಗಿದೆ. ದಿನಕಳೆದಂತೆ ಸಲ್ಮಾನ್ ನ ಪೋಷಣೆ ಕೂಡ ಮೃಗಾಲಯದ ಅಧಿಕಾರಿಗಳಿಗೆ ದುಬಾರಿಯಾಗ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ದೆಹಲಿ ಮೃದಾಲಯದ ಸಿಬ್ಬಂದಿ ಸಲ್ಮಾನ್ ನನ್ನು ಮತ್ತೆ ಆತನ ಹುಟ್ಟೂರು ತಿರುವನಂತಪುರಕ್ಕೆ ರವಾನಿಸಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com