ಪಶ್ಚಿಮಬಂಗಾಳ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟಂತ ಎಲ್ಲಾ ಕಡತಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನೇತಾಜಿ ಅವರ ಕಣ್ಮರೆ ರಹಸ್ಯವನ್ನು ಬೆಳಕಿಗೆ ತರುವ ದೃಷ್ಟಿಯಿಂದ ಅವರ ಮತ್ತು ಐಎನ್ಎಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗ ಮಾಡಬೇಕು ಎನ್ನುವ ಬೇಡಿಕೆ ಜನರಿಂದ ನಿರಂತರವಾಗಿ ಕೇಳಿ ಬರುತ್ತಿತ್ತು. ಈ ಕುರಿತು ಲೋಕಸಭೆಯಲ್ಲೂ ಧ್ವನಿ ಎತ್ತಲಾಗಿದೆ. ಅಲ್ಲದೇ, ನೇತಾಜಿಗೆ ಸಂಬಂಧಪಟ್ಟಂತೆ ಅನೇಕ ಹೇಳಿಕೆಗಳು ಕೇಳಿಬರುತ್ತಿದ್ದವು. ಈ ಎಲ್ಲಾ ಚರ್ಚೆಗಳಿಗೆ ಅಂತ್ಯವಾಡಲೆಂದು ತೀರ್ಮಾನಿಸಿ ನೇತಾಜಿಗೆ ಸಂಬಂಧಪಟ್ಟ ಕಡತಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
1937ರಿಂದ 1947ರವರೆಗೆ ಇರುವ ಎಲ್ಲಾ ಕಡತಗಳನ್ನು ಸೆಪ್ಟೆಂಬರ್ 18ರಂದು ಸಾರ್ವಜನಿಕವಾಗಿ ಬಹಿರಂಗಪಡಿಸಲಿದ್ದು, 64 ಕಡತಗಳು ಬಹಿರಂಗಗೊಳ್ಳಲಿದೆ ಎಂದ ಅವರು, ಈ ನಿರ್ಧಾರವನ್ನು ನೇತಾಜಿ ವಂಶಸ್ಥರು ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.
ನೇತಾಜಿ ಅವರ ಜನ್ಮ ದಿನದ ಬಗ್ಗೆ ತಿಳಿದಿದೆ. ಆದರೆ, ಅವರ ಸಾವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಜನತೆ ಅವರ ಕೊನೆಯ ದಿನಗಳು ಹೇಗಿತ್ತು ಎಂಬುದುರ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸಿದ್ದಾರೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಈ ಕೆಲಸವನ್ನು ನಿಭಾಯಿಸಲಾಗುವುದು ಎಂದ ಅವರು, ಜನತೆ ನೇತಾಜಿ ಬಗ್ಗೆ ತಿಳಿದುಕೊಳ್ಳಬೇಕಿದೆ. ಹಾಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
1945ರ ಆಗಸ್ಟ್ 22ರಂದು ಟೋಕಿಯೋ ರೇಡಿಯೋ, ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಜಪಾನ್ಗೆ ತೆರಳುತ್ತಿದ್ದಾಗ, ಈಗಿನ ತೈವಾನ್ ಆಗಿದ್ದ ಫೊರ್ಮೋಸಾದಲ್ಲಿ ಆಗಸ್ಟ್ 18, 1945ರಂದು ಸಂಭವಿಸಿದ್ದ ವಿಮಾನಾಪಘಾತದಲ್ಲಿ ಅಸುನೀಗಿದ್ದರು ಎಂದು ಘೋಷಿಸಿತ್ತು.
Advertisement