ಪಾಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ಕುಮಾರ್ ಸರ್ಕಾರ ಮಂಗಳವಾರ ಸಂಪೂರ್ಣ ಮದ್ಯನಿಷೇಧ ಜಾರಿ ಮಾಡಿದ ಬೆನ್ನಲ್ಲೇ 749 ಜನ ಅಸ್ವಸ್ಥಗೊಂಡಿದ್ದಾರೆ.
ಏಕಾಏಕಿ ಆಲ್ಕೋಹಾಲ್ ಸೇವನೆ ಸ್ಥಗಿತಗೊಳಿಸಿರುವುದರಿಂದ ಆಗುವ ಅಡ್ಡಪರಿಣಾಮಗಳಿಂದ ಅಸ್ವಸ್ಥಗೊಂಡಿರುವ ನೂರಾರು ಮಂದಿ ವೈದ್ಯರ ಬಳಿ ಧಾವಿಸಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಿರುವ 38 ವ್ಯಸನ ಮುಕ್ತ ಕೇಂದ್ರಗಳಿಗೆ ಕನಿಷ್ಠ 749 ಮಂದಿ ದಾಖಲಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಅನೇಕರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಒಬ್ಬ ವ್ಯಕ್ತಿಯಂತೂ ಡಜನ್ ಗಟ್ಟಲೇ ಸೋಪ್ ತಿಂದು ಮತ್ತೇರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಮಾರ್ಚ್ 31ರವರೆಗೆ ಪ್ರತಿ ದಿನ ಸರಾಸರಿ 600-1200ಎಂಲ್ ಸರಾಯಿ ಕುಡಿಯುತ್ತಿದ್ದ ವ್ಯಕ್ತಿ, ಪಾನ ನಿಷೇಧದ ನಂತರ ಮನೆಯವರನ್ನೇ ಗುರುತು ಹಿಡಿಯುತ್ತಿಲ್ಲ. ಆಸ್ಪತ್ರೆಗೆ ಕರೆತಂದಾಗ ನೆಟ್ಟಗೆ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ. ಇಡೀ ದೇಹ ನಡಗುತಿತ್ತು ,' ಎಂದು ವ್ಯಸನ ಮುಕ್ತ ಕೇಂದ್ರದ ಅಧಿಕಾರ. ಡಾ. ಆರ್.ಕೆ ಸಿಂಗ್ ಹೇಳಿದ್ದಾರೆ.
ಕುಡಿತ ಬಿಟ್ಟಿರಲಾರದ ಅನೇಕರು ಕೈಗ ಸಿಕ್ಕ ವಸ್ತುಗಳನ್ನು ತಿಂದು ನಶೆ ಏರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕೆಲವರು ದೊಡ್ಡ ಪ್ರಮಾಣದಲ್ಲಿ ಪೇಪರ್ ತಿಂದರೆ, ಇನ್ನು ಕೆಲವರು ಒಂದಿಷ್ಟು ಪೇಯ್ನ್ ಕಿಲ್ಲರ್ಗಳನ್ನು ಸೇವಿಸಿದ್ದಾರೆ. 'ನಳಂದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ವ್ಯಸನಮುಕ್ತ ಕೇಂದ್ರಕ್ಕೆ ಕತೆತಂದಿದ್ದ ಹದಿಹರೆಯದ ಬಾಲಕ ಸಿಟ್ಟಿನಲ್ಲಿ ಮೆಣಸಿನಕಾಯಿ ಮುಂತಾದ ಕೈಗೆ ಸಿಕ್ಕ ವಸ್ತುಗಳನ್ನು ತಿಂದಿದ್ದಾನೆ, ಎಂದು ವೈದ್ಯರು ತಿಳಿಸಿದ್ದಾರೆ.
Advertisement