ಇಸ್ಲಾಮಾಬಾದ್: ಏ.11 ರಂದು ಸಾವನ್ನಪ್ಪಿದ್ದ ಭಾರತೀಯ ಪ್ರಜೆ ಕಿರ್ಪಾಲ್ ಸಿಂಗ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಪಾಕಿಸ್ತಾನ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.
ಕಿರ್ಪಾಲ್ ಸಿಂಗ್ ಸಾವು ಕುರಿತಂತೆ ಪಾಕಿಸ್ತಾನ ವಿರುದ್ಧ ಹಲವು ಅನುಮಾನಗಳು ಮೂಡಿದ್ದವು. ಅಲ್ಲದೆ, ಇದು ಅನುಮಾನಾಸ್ಪದ ಸಾವಲ್ಲ ಕೊಲೆ ಎಂಬ ಆರೋಪಗಳ ಕೇಳಿಬಂದಿದ್ದವು.
ಹೀಗಾಗಿ ಕಿರ್ಪಾಲ್ ಸಿಂಗ್ ಸಾವು ಕುರಿತಂತೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಜಕಾರಿಯಾ ಅವರು, ಕಿರ್ಪಾಲ್ ಸಿಂಗ್ ಅವರು ಸಾವನ್ನಪ್ಪಿದ್ದು ಹೃದಯಾಘಾತದಿಂದ. ಪ್ರತಿಯೊಂದು ವಿಷಯವನ್ನು ಅನುಮಾನ, ಪಿತೂರಿಯೆಂಬಂತೆ ನೋಡಬಾರದು. ಕಿರ್ಪಾಲ್ ಅವರನ್ನು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ಇಸ್ಪಾಮಾಬಾದ್ ಭಾರತೀಯ ರಾಯಭಾರದೊಂದಿಗೆ ಸಂಪರ್ಕದಲ್ಲಿದ್ದು, ಕಿರ್ಪಾಲ್ ಸಾವು ಕುರಿತಂತೆ ಭಾರತೀಯ ರಾಯಭಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಇನ್ನು ಪ್ರಕರಣ ಸಂಬಂಧ ಭಾರತೀಯ ಆಂತರಿಕ ಸಚಿವಾಲಯದೊಂದಿಗೂ ಮಾತುಕತೆ ನಡೆಸಲಾಗಿದ್ದು, ಮೃತದೇಹವನ್ನು ರವಾನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಕಿರ್ಪಾಲ್ ಸಿಂಗ್ ಸಾವು ಪ್ರಕರಣ ಕುರಿತಂತೆ ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಿರ್ಪಾಲ್ ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದು, ಪ್ರಕರಣವನ್ನು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಭಾರತೀಯ ಪ್ರಜೆಯಾಗಿರುವ (50) ಕಿರ್ಪಾಲ್ ಸಿಂಗ್ ಅವರು 1992ರಲ್ಲಿ ಪಾಕಿಸ್ತಾನದ ಒಳಗಿನ ವಾಘ ಗಡಿಯನ್ನು ದಾಟಿ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.
ಪಂಜಾಬ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರ್ಪಾಲ್ ಸಿಂಗ್ ವಿರುದ್ಧ ಆರೋಪ ಹೊರಿಸಿ ಮರಣದಂಡನೆಯನ್ನು ವಿಧಿಸಲಾಗಿತ್ತು. ಬೇಹುಗಾರಿಕೆ ಆರೋಪದಡಿ ಬಂಧನಕ್ಕೊಳಗಾಗಿದ್ದ ಕಿರ್ಪಾಲ್ ಸಿಂಗ್ ಅವರು ಕಳೆದ 20 ವರ್ಷದಿಂದ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ಕಿರ್ಪಾಲ್ ಸಿಂಗ್ ಏ.11 ರಂದು ಲಾಹೋರ್ ನ ಕಾಟ್ ಲಖ್ಪತ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ರಬ್ಜಿತ್ ಸಿಂಗ್ ಪ್ರಕರಣದಂತೆಯೇ ಕಿರ್ಪಾಲ್ ಸಿಂಗ್ ಪ್ರಕರಣದಲ್ಲೂ ಆಗಿದೆ. ಕಿರ್ಪಾಲ್ ರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿತ್ತು.
Advertisement