ಲಖನೌ: ಬಿಎಸ್ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜೈಲು ಪಾಲಾಗಿದ್ದ ಬಿಜೆಪಿ ಉಚ್ಛಾಟಿತ ನಾಯಕ ದಯಾಶಂಕರ್ ಸಿಂಗ್ ಅವರಿಗೆ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ಮಾಯಾವತಿ ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದಿದ್ದ ದಯಾಶಂಕರ್ ಸಿಂಗ್ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಸುಮಾರು 10 ದಿನಗಳ ಕಾಲ ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ದಯಾಶಂಕರ್ ಸಿಂಗ್ ಅವರನ್ನು ಜುಲೈ 29ರಂದು ಬಕ್ಸರ್ ನಲ್ಲಿ ಬಂಧಿಸಲಾಗಿತ್ತು.
ಮಾಯಾವತಿ ಅವರು ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದು, ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದು ಟೀಕಿಸಿದ್ದರು. ಇದಕ್ಕೆ ಸ್ವಪಕ್ಷ ಬಿಜೆಪಿ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಬಿಜೆಪಿ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಬಿಎಸ್ಪಿ ಕಾರ್ಯಕರ್ತರು ದಲಿತ ಮಹಿಳೆಗೆ ಅವಮಾನ ಮಾಡಿದ್ದಾರೆಂದು ಎಫ್ಐಆರ್ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ದಯಾಶಂಕರ್ ಕುಟುಂಬ ಸದಸ್ಯರು ಮಾಯಾವತಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.