ನವದೆಹಲಿ: ಕಾಶ್ಮೀರ ಹಿಂಸಾಚಾರ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬೆನ್ನಲ್ಲೇ ಕಾಶ್ಮೀರ ಸಮಸ್ಯೆ ಕುರಿತು ಭಾರತವನ್ನು ಚರ್ಚೆಗೆ ಆಹ್ವಾನಿಸಿದ್ದ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲಾಗಿದ್ದು, ಕಾಶ್ಮೀರ ಸಮಸ್ಯೆಗೂ ಮೊದಲು ಪಾಕಿಸ್ತಾನ ಭಯೋತ್ಪಾದನೆ ಕುರಿತು ಮಾತನಾಡಲಿ ಎಂದು ತಿರುಗೇಟು ನೀಡಿದೆ.
ಭಾರತ ಕಾಶ್ಮೀರ ಸಮಸ್ಯೆ ಕುರಿತಂತೆ ಪಾಕಿಸ್ತಾನದೊಂದಿಗೆ ಚರ್ಚೆಗೆ ಸಿದ್ಧವಿದ್ದು, ಅದೂ ಕೂಡ ಗಡಿಯಾಚೆಗಿನ ಭಯೋತ್ಪಾದನೆ, ಮುಂಬೈ ಮತ್ತು ಪಠಾಣ್ ಕೋಟ್ ಉಗ್ರ ದಾಳಿ ಸೇರಿದಂತೆ ಸಂಬಂಧಪಟ್ಟ ವಿಚಾರಗಳ ಕುರಿತು ಮಾತ್ರ ಚರ್ಚೆ ನಡೆಯಬೇಕು ಎಂದು ದಿಟ್ಟ ಉತ್ತರ ನೀಡಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಅವರು, ಪಾಕಿಸ್ತಾನದ ಆಹ್ವಾನವನ್ನು ಭಾರತ ಸ್ವಾಗತಿಸುತ್ತದೆ. ಆದರೆ ಚರ್ಚೆ ವೇಳೆ ಪಾಕಿಸ್ತಾನ ಅನಾವಶ್ಯಕ ವಿಚಾರಗಳನ್ನು ಮಾತನಾಡುವುದನ್ನು ಬಿಟ್ಟು ಕೇವಲ ಕಾಶ್ಮೀರ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಭಯೋತ್ಪಾದನೆ ಕುರಿತು ಮಾತ್ರ ಚರ್ಚಿಸಬೇಕು ಎಂದು ಹೇಳಿದ್ದಾರೆ.
ಬಹುದ್ದೂರ್ ಅಲಿಯಂತಹ ಉಗ್ರಗಾಮಿಗಳ ಗಡಿ ನುಸುಳುವಿಕೆ, ಕಾಶ್ನೀರ ಹಿಂಸಾಚಾರಕ್ಕೆ ಸಂಚು, ಗಡಿಯಾಚೆಗಿನ ಭಯೋತ್ಪಾದನೆ, ಹಫೀಜ್ ಸಯ್ಯೀದ್ ರಂತಹ ಉಗ್ರವಾದಿಗಳ ಸಾರ್ವಜನಿಕ ಪರೇಡ್, ಸಯ್ಯೀದ್ ಸಲಾವುದ್ದೀನ್ ಪ್ರಚೋದನಾತ್ಮಕ ಭಾಷಣ ಸೇರಿದಂತೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸಬೇಕು ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.
Advertisement