ಗಾಜಿಯಾಬಾದ್: ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಅವರ ಭದ್ರತಾ ಸಿಬ್ಬಂದಿ ಶುಕ್ರವಾರ ಗಾಜಿಯಾಬಾದ್ ನಲ್ಲಿ ವಸತಿ ಸಹಕಾರ ಸಂಘ ಒಂದರ ಗಾರ್ಡ್ಗಳ ಮೇಲೆ ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು, ತಮ್ಮ ಭದ್ರತಾ ಸಿಬ್ಬಂದಿಯ ಕೃತ್ಯಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ.
ಸಚಿವರ ಕಾರು ಬಂದಾಗ ಗೇಟ್ ತೆರೆಯಲು ಎರಡು ನಿಮಿಷ ತಡವಾದದ್ದಕ್ಕಾಗಿ ಸಚಿವರ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ನಿಂದಿಸಿದರು ಎಂದು ಸೊಸೈಟಿ ಗಾರ್ಡ್ಗಳು ಹೇಳಿದ್ದಾರೆ.
ವಸತಿ ಸಹಕಾರ ಸಂಘದ ಮಂದಿ ಈ ಘಟನೆಯಿಂದ ಸಿಟ್ಟಿಗೆದ್ದಿದ್ದಾರೆ. ಇದು ವರ್ತನೆಯ ವಿಧಾನವಲ್ಲ. ನಾವು ಪೊಲೀಸರನ್ನು ಸಂಪರ್ಕಿಸುತ್ತೇವೆ ಎಂದು ಪಂಕಜ್ ಹೌಸಿಂಗ್ ಸೊಸೈಟಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.