ಚೆನ್ನೈ: ನಾಡಾ ಚಂಡಮಾರುತ ಭೀತಿಗೊಳಗಾಗಿದ್ದ ತಮಿಳುನಾಡಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ಕರಾವಳಿ ತೀರಕ್ಕೆ ಅಪ್ಪಳಿಸುತ್ತಿದ್ದಂತೆಯೇ ಚಂಡಮಾರುತ ತನ್ನ ವೇಗವನ್ನು ಕಳೆದುಕೊಂಡಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಉಂಟಾದ ನಾಡ ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಭಾರಿ ಭೀತಿಗೆ ಕಾರಣವಾಗಿತ್ತು. ಭಾರಿ ಮಳೆಯಿಂದಾಗಿ ಈಗಾಗಲೇ ಉಭಯ ರಾಜ್ಯಗಳು ತತ್ತರಿಸುತ್ತಿದ್ದು, ಇದೀಗ ನಾಡಾ ಚಂಡಮಾರುತ ದುರ್ಬಲಗೊಂಡ ಹಿನ್ನಲೆಯಲ್ಲಿ ಚಂಡಮಾರುತ ತಮಿಳುನಾಡು ಕರಾವಳಿ ತೀರ ತಲುಪುವುದು ವಿಳಂಬವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಚಂಡಮಾರುತ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಪುದುಚೇರಿ ಹಾಗೂ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕಾರೈಕಲ್, ನಾಗಪಟ್ಟಣಂ, ಕಡಲೂರು, ತಿರುವಾರೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಉಳಿದಂತೆ ಪುದುಚೇರಿಯ ಕಾರೈಕಲ್ ನಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ.
ಪ್ರಸ್ತುತ ನಾಡಾ ಚಂಡ ಮಾರುತ ನಾಗಪಟ್ಟಣಂ ಮತ್ತು ವೇದಾರಣ್ಯಂ ದಾಟಿದ್ದು, ಕುಡಲೂರು ಮುಖವಾಗಿ ತಮಿಳುನಾಡಿನತ್ತ ಧಾವಿಸುತ್ತಿದ್ದು, ಈ ಪ್ರದೇಶದಲ್ಲಿ 4 ಸೆಂ.ಮೀನಷ್ಟು ಮಳೆಯಾಗುತ್ತಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ ಕರಾವಳಿ ತೀರದಲ್ಲಿ ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಎನ್ ಡಿಆರ್ ಎಫ್ ಸಿಬ್ಬಂದಿ ಸಜ್ಜಾಗಿ ನಿಂತಿದ್ದಾರೆ.
Advertisement