ಕೋಲ್ಕತಾ: ಭಾರತೀಯ ಸೇನೆ ವಿರುದ್ಧ ಯಾವುದೇ ಆರೋಪ ಮಾಡುವಾಗ ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶ್ರಿನಾಥ್ ತ್ರಿಪಾಠಿ ಅವರ ಹೇಳಿಕೆ ದುರದೃಷ್ಟಕರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೇಳಿದ್ದಾರೆ.
ರಾಜ್ಯಪಾಲರ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ಕಳೆದ 8 ದಿನಗಳಿಂದ ನಗರದಲ್ಲಿ ಇರಲಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಯಾವುದೇ ಹೇಳಿಕೆ ನೀಡುವ ಮುನ್ನ ರಾಜ್ಯಪಾಲರು ವಿವರವಾಗಿ ಪರಿಶೀಲಿಸಬೇಕಿತ್ತು. ಆದರೆ ಹಾಗೆಯೇ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಭಾರತೀಯ ಸೇನೆಯಂತಹ ಜವಾಬ್ದಾರಿ ಸಂಸ್ಥೆಗಳ ವಿರುದ್ಧ ಮಾತನಾಡುವಾಗ ಎಲ್ಲರು ಎಚ್ಚರಿಕೆಯಿಂದಿರಬೇಕು. ಸೇನೆಯ ಗೌರವಕ್ಕೆ ಚ್ಯುತಿ ತರಬೇಡಿ. ಸೇನೆಯ ಹೆಸರಿಗೆ ಮಸಿ ಬಳಿಯಬೇಡಿ" ಎಂದು ಬ್ಯಾನರ್ಜಿ ಮಾಡಿರುವ ಆಪಾದನೆಯ ಬಗ್ಗೆ ಪ್ರಶ್ನಿಸಿದಾಗ ತ್ರಿಪಾಠಿ ಹೇಳಿದ್ದರು.
ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ಟೋಲ್ ಪ್ಲಾಜಾಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಅವರು ಗುರುವಾರ ರಾತ್ರಿ ತಮ್ಮ ಕಚೇರಿಯಿಂದ ಹೊರಬರದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು. ಇದು ಸಂಸತ್ತಿನಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿತ್ತು.