ನವದೆಹಲಿ: ಹಲವು ವರ್ಷಗಳಿಂದಲೂ ಪಾಕಿಸ್ತಾನ ಭಾರತದ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದು, ಭಾರತದ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ಆರೋಪಗಳು ಆಧಾರ ರಹಿತವಾಗಿದ್ದು, ಕೂಡಲೇ ಜಾಧವ್ ಅವರನ್ನು ಬಿಡುಗಡೆ ಮಾಡಬೇಕೆಂದು ಭಾರತ ಪಾಕಿಸ್ತಾನಕ್ಕೆ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಕುಲ್ ಭೂಷಣ್ ಜಾಧವ್ ಅವರ ಪ್ರಕರಣ ಸಂಬಂಧ ಮಾಧ್ಯಮಗಳ ಸಂಘರ್ಷವನ್ನು ನೋಡಿದ್ದೇವೆ. ಸಾಕಷ್ಟು ವಿಚಾರದಲ್ಲಿ ಈ ರೀತಿಯ ಬೆಳವಣಿಗೆಗಳನ್ನು ನಾವು ನೋಡಿದ್ದೇವೆ. ಜಾಧವ್ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ಆರೋಪಗಳನ್ನು ಭಾರತ ಸಹಿಸಿಕೊಳ್ಳುತ್ತಲೇ ಬಂದಿದೆ. ಜಾಧವ್ ವಿರುದ್ಧ ಪಾಕಿಸ್ತಾನ ಆರೋಪ ಆಧಾರ ರಹಿತವಾಗಿದೆ ಎಂದು ಹೇಳಿದ್ದಾರೆ.
ತಪ್ಪಾಗಿ ಅರ್ಥೈಸಿ ಹಾಗೂ ಅಕ್ರಮವಾಗಿ ಜಾಧವ್ ಅವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಬಂಧನಕ್ಕೊಳಪಡಿಸಿ ಈ ವರೆಗೂ 9 ತಿಂಗಳುಗಳು ಕಳೆದಿವೆ. ಜಾಧವ್ ವಿರುದ್ಧ ಪಾಕಿಸ್ತಾನಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಿದ್ದರೂ. ಪಾಕಿಸ್ತಾನ ಜಾಧವ್ ಅವರನ್ನು ಬಿಡುಗಡೆ ಮಾಡಿಲ್ಲ.
ಭಾರತದ ಅಧಿಕೃತ ಕೋರಿಕೆಗಳ ಹೊರತಾಗಿಯೂ ಪಾಕಿಸ್ತಾನ ಜಾಧವ್ ಅವರಿಗೆ ಕಾನ್ಸುಲರ್ (ದೂತವಾಸ) ಸಂಪರ್ಕಾವಕಾಶವನ್ನು ಕಲ್ಪಿಸಿಲ್ಲ. ಕೂಡಲೇ ಪಾಕಿಸ್ತಾನ ಜಾಧವ್ ಅವರನ್ನು ಬಿಡುಗಡೆ ಮಾಡಬೇಕಿದ್ದು, ಭಾರತೀಯ ದೂತವಾಸ ಬಳಕೆ ಮಾಡಲು ಅನುಮತಿ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಜಾಧವ್ ಬಂಧನಕ ಕುರಿತಂತೆ ತಪ್ಪೊಪ್ಪಿಕೊಂಡಿದ್ದ ಪಾಕಿಸ್ತಾರ ಕುಲ್ ಭೂಷಣ್ ಜಾಧವ್ ಅವರು ಭಾರತೀಯ ಬೇಹುಗಾರನಲ್ಲ. ಜಾಧವ್ ಭಾರತೀಯ ಬೇಹುಗಾರನೆಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಹೇಳಿಕೊಂಡಿತ್ತು.
ಬಲೂಚಿಸ್ತಾನದಲ್ಲಿ ಜಾಧವ್ ಅವರನ್ನು ಬಂಧಿನಕ್ಕೊಳಪಡಿಸಿದ್ದ ಪಾಕಿಸ್ತಾನ, ಜಾಧವ್ ಭಾರತೀಯ ನೌಕಾಪಡೆಯ ಸೇವೆಯಲ್ಲಿರುವ ವ್ಯಕ್ತಿಯಾಗಿದ್ದು, ಬಲೂಚಿಸ್ತಾನ ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಿತ್ತು. ಅಲ್ಲದೆ, ಬಲವಂತದಿಂದ ಪಡೆಯಲಾಗಿದ್ದ ತಪ್ಪೊಪ್ಪಿಗೆಯ ಹೇಳಿಕೆಯ ವಿಡಿಯೋವೊಂದನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿತ್ತು.
Advertisement