ಹೈದರಾಬಾದ್: ನೋಟು ನಿಷೇಧ ಬಳಿಕ ಬ್ಯಾಂಕ್ ಖಾತೆಗೆ 98 ಕೋಟಿ ಅಕ್ರಮ ಕಪ್ಪುಹಣವನ್ನು ಜಮೆ ಮಾಡಿದ್ದ ಹೈದರಾಬಾದ್ ಮೂಲದ ಉದ್ಯಮಿಯೋರ್ವನನ್ನು ಬುಧವಾರ ಬಂಧಿಸಲಾಗಿದೆ.
ಹೈದರಾಬಾದ್ ನ ಉದ್ಯಮಿ ಕೈಲಾಶ್ ಚಾಂದ್ ಗುಪ್ತಾ (65 ವರ್ಷ) ಎಂಬಾತನನ್ನು ಕೇಂದ್ರೀಯ ಅಪರಾಧ ದಳದ ಪೊಲೀಸರು ಬಂಧಿಸಿದ್ದು, ಕಪ್ಪುಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆಗೆ ಜಮೆ ಮಾಡಿದ ಆರೋಪದ ಮೇರೆಗೆ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕಪ್ಪುಹಣ ನಿಯಂತ್ರಣ ಕಾಯ್ದೆ, ಹವಾಲಾ, ಮತ್ತು ಕ್ರಿಮಿನಲ್ ಅಪರಾಧಗಳ ಕಾಯ್ದೆಯಡಿಯಲ್ಲಿ ಕೈಲಾಶ್ ಚಾಂದ್ ಗುಪ್ತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾರ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಉದ್ಯಮಿ ಕೈಲಾಶ್ ಚಾಂದ್ ಗುಪ್ತಾ ತಮ್ಮ ಬಳಿ ಇದ್ದ ಸುಮಾರು 98 ಕೋಟಿ ರು. ಕಪ್ಪುಹಣವನ್ನು ವಿವಿಧ ನಮೂನೆಗಳ ಮೂಲಕ ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಅನುಮಾನ ಬಾರದಿರಲಿ ಎಂದು ಈ 98 ಕೋಟಿ ರು.ಗಳನ್ನು ನಕಲಿ ದಾಖಲೆ ಸೃಷ್ಟಿಸಿ ನವೆಂಬರ್ 8ಕ್ಕಿಂತ ಮೊದಲೇ ಬ್ಯಾಂಕಿಗೆ ಜಮೆ ಮಾಡಿರುವಂತೆ ಸೃಷ್ಟಿಸಿದ್ದಾರೆ. ಅಧಿಕಾರಿಗಳ ತನಿಖೆ ವೇಳೆ ಈ ವಿಚಾರ ಬಹಿರಂಗವಾಗಿದ್ದು, ಇದೀಗ ಉದ್ಯಮಿ ಕೈಲಾಶ್ ಚಾಂದ್ ಗುಪ್ತಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಂತೆಯೇ ಗುಪ್ತಾ ಅವರ ಸಂಬಂಧಿ ಉದ್ಯಮಿ ನರೇಡಿ ನರೇಂದ್ರ ಕುಮಾರ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದು, ನರೇಂದ್ರ ಕುಮಾರ್ ಅವರು ತಮ್ಮ ಭಾವ ಕೈಲಾಶ್ ಚಾಂದ್ ಗುಪ್ತಾ ಅವರನ್ನು ಪೊಲೀಸ್ ಬಂಧನದಿಂದ ತಪ್ಪಿಸಲು ಅವರನ್ನು ಅಡಗಿಸಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
Advertisement