ಮೂಲತಃ ಟಾಂಜೇನಿಯಾ ದೇಶಕ್ಕೆ ಸೇರಿದ 21 ವರ್ಷದ ಯುವತಿ ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ಬಿಬಿಎ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಕಳೆದ ಭಾನುವಾರ ರಾತ್ರಿ ಸುಂದರೇಶನ್ ಎಂಬ ತಮ್ಮ ಕಾರು ಚಾಲಕನೊಂದಿಗೆ ಹೆಸರುಘಟ್ಟದತ್ತ ಪ್ರಯಾಣಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಓರ್ವ ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಮಾರು 35 ವರ್ಷದ ಸ್ಥಳೀಯ ಮಹಿಳೆ ಮೃತಪಟ್ಟಿದ್ದು, ಕಾರು ಚಾಲಕ ಸುಂದರೇಶನ್ ಕೂಡಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತವಾಗುತ್ತಿದ್ದಂತೆಯೇ ಓಡಿಬಂದ ಸಾರ್ವಜನಿಕರು ಕಾರಿನ ಹಿಂಬದಿಯಲ್ಲಿದ್ದ ಯುವತಿಯನ್ನು ಹೊರಗೆಳೆದು ಮನಸೋ ಇಚ್ಚೆ ಥಳಿಸಿದ್ದಾರೆ. ಅಲ್ಲದೆ ಕೆಲ ದುಷ್ಕರ್ಮಿಗಳು ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದು, ಈ ವೇಳೆ ಸ್ಥಳೀಯ ಯುವಕನೊಬ್ಬ ಟೀ-ಶರ್ಟ್ ನೀಡಲು ಮುದಾದಾಗ ಆತನಿಗೂ ಮನಸೋ ಇಚ್ಚೆ ಥಳಿಸಿದ್ದಾರೆ.