ಹಲವರ ಬಾಳಿಗೆ ಬೆಳಕಾದ ಸೂರ್ಯ

ತನ್ನ ಮಗ ಸಾಧನೆ ಮಾಡಿ ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಕಣ್ತುಂಬ ನೋಡಿ ಸವಿಯುವ ಕನಸು ಕಂಡಿದ್ದರು...
ಮಗನ ಸಾವಿನ ದುಃಖವನ್ನು ತಾಳಲಾರದೆ ರೋದಿಸುತ್ತಿರುವ ಸೂರ್ಯನ ತಾಯಿ ಅಲಮೇಲ ಮತ್ತು ಆಕೆಯ ಸಂಬಂಧಿಕರು. ಒಳಚಿತ್ರದಲ್ಲಿ ಸೂರ್ಯ.
ಮಗನ ಸಾವಿನ ದುಃಖವನ್ನು ತಾಳಲಾರದೆ ರೋದಿಸುತ್ತಿರುವ ಸೂರ್ಯನ ತಾಯಿ ಅಲಮೇಲ ಮತ್ತು ಆಕೆಯ ಸಂಬಂಧಿಕರು. ಒಳಚಿತ್ರದಲ್ಲಿ ಸೂರ್ಯ.

ಚೆನ್ನೈ: ತನ್ನ ಮಗ ಸಾಧನೆ ಮಾಡಿ ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಕಣ್ತುಂಬ ನೋಡಿ ಸವಿಯುವ ಕನಸು ಕಂಡಿದ್ದರು ಆ ಹೆತ್ತಮ್ಮ. ಇನ್ನೇನು ಬೆಳೆದು ದೊಡ್ಡವನಾಗಿ ಪೋಷಕರ ಕನಸನ್ನು ನನಸು ಮಾಡುವುದರಲ್ಲಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಲಮೇಲು ಅವರ ಪುತ್ರ ಎಂ.ಸೂರ್ಯ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀರಿಕೊಂಡ.

''ಅಯ್ಯೋ ಬದುಕಿಗೆ ಆಸರೆಯಾಗಬೇಕಾಗಿದ್ದ ಮಗ ಹೋಗಿಬಿಟ್ಟನಲ್ಲಾ ಎಂದು ಅಳುತ್ತಾ ಕೂರದೆ ಸತ್ತ ಮೇಲಾದರೂ ನಾಲ್ಕು ಜನಕ್ಕೆ ಉಪಯೋಗವಾಗಲಿ ಎಂದು ಅನಕ್ಷರಸ್ಥೆ ಅಲಮೇಲು ತನ್ನ ಮಗನ ದೇಹದ ಅಂಗಾಂಗಳನ್ನು ದಾನ ಮಾಡುವ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.

ಘಟನೆ ಹಿನ್ನೆಲೆ: ಅಲಮೇಲು, ಬೃಹತ್ ಚೆನ್ನೈ ಕಾರ್ಪೊರೇಷನ್ ಸಮುದಾಯ ಭವನದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಆಕೆಯ ಪತಿ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡಿದ್ದರು. ಅವರ ಮೂವರು ಗಂಡು ಮಕ್ಕಳಲ್ಲಿ ಸೂರ್ಯ ಕಿರಿಯವರು. ಆ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದವರಲ್ಲಿ ಸೂರ್ಯನೇ ಮೊದಲಿಗರು. ಉಳಿದಿಬ್ಬರು ಸಹೋದರರು ಅನಕ್ಷರಸ್ಥರು. ಸೂರ್ಯ, ಚೆನ್ನೈಯ ಮೈಲಪೊರ್ ನ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ಬಿ.ಎ ತತ್ವಶಾಸ್ತ್ರ ಅಧ್ಯಯನ ಮಾಡುತ್ತಿದ್ದನು. ಓದಿ ವಿದ್ಯಾವಂತನಾಗಿ ನೌಕರಿ ಗಿಟ್ಟಿಸಿ ಕುಟುಂಬವನ್ನು ಚೆನ್ನಾಗಿ ಸಾಕುತ್ತಾನೆ ಎಂಬ ಭರವಸೆ ಕುಟುಂಬದವರಿಗೆ ಇತ್ತು.

ಆದರೆ ಅವರ ನಿರೀಕ್ಷೆಗಳೆಲ್ಲವೂ ಕಳೆದ ಭಾನುವಾರ ನುಚ್ಚುನೂರಾಯಿತು. ತನ್ನ ಸ್ನೇಹಿತನ ಜೊತೆ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದಾಗ ಕೊರ್ರುಕುಪೇಟೆಯಲ್ಲಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡ ಸೂರ್ಯ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಮೊನ್ನೆ ಮಂಗಳವಾರ ಸೂರ್ಯನ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.

ಬುಧವಾರ ಆಸ್ಪತ್ರೆಯ ವೈದ್ಯರು ಸೂರ್ಯನ ಅಂಗಾಂಗಳನ್ನು ಯಶಸ್ವಿಯಾಗಿ ಹೊರತೆಗೆದು ಕರುಳು ಮತ್ತು ಕಿಡ್ನಿಯನ್ನು ಆಸ್ಪತ್ರೆಯಲ್ಲಿ ಅಗತ್ಯವಿದ್ದವರಿಗೆ ಕಸಿ ಮಾಡಿದ್ದಾರೆ. ಮತ್ತೊಂದು ಕಿಡ್ನಿಯನ್ನು ಕಿಲ್ಪೌಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರೋಗಿಯೊಬ್ಬರಿಗೆ ನೀಡಿದ್ದಾರೆ. ಕಣ್ಣುಗಳನ್ನು ಸರ್ಕಾರಿ ಕಣ್ಣಿನ ಆಸ್ಪತ್ರೆಗೆ ಮತ್ತು ಹೃದಯ, ಶ್ವಾಸಕೋಶವನ್ನು ಅಪೋಲೋ ಆಸ್ಪತ್ರೆಗೆ ದಾನ ಮಾಡಲಾಗಿದೆ.

 ಸತ್ತ ಮೇಲೆ ದೇಹದ ಅಂಗಾಂಗಳನ್ನು ದಾನ ಮಾಡುವ ಸಿನಿಮಾದಿಂದ ಮತ್ತು ಅಂಗಾಂಗ ದಾನ ಮಾಡುವುದಾಗಿ ಹೆಸರು ದಾಖಲಿಸಿಕೊಂಡ ಸಿನಿಮಾ ನಟರಿಂದ ಪ್ರೇರಿತನಾಗಿ ಸೂರ್ಯ ಅಂಗಾಂಗ ದಾನದ ಬಗ್ಗೆಯೇ ಮಾತನಾಡುತ್ತಿದ್ದ ಎನ್ನುತ್ತಾನೆ ಅವನ ಸ್ನೇಹಿತ ಎ.ವಿಘ್ನೇಶ್ವರ.

'' ಸೂರ್ಯ ಬದುಕಿದ್ದಾಗ ಮನುಷ್ಯರ ಸಾವಿನ ನಂತರ ಅಂಗಾಂಗ ದಾನದ ಬಗ್ಗೆ ಹೇಳುತ್ತಿದ್ದ. ಅವನು ಹಾಗೆ ಹೇಳುವಾಗ ನಾನು ಅವನನ್ನು ಬೈಯುತ್ತಿದ್ದೆ. ನೀನು ಇನ್ನೂ ಚಿಕ್ಕವ, ನಿನಗೆ ಸಾಕಷ್ಟು ಭವಿಷ್ಯವಿದೆ ಎಂದು ಹೇಳುತ್ತಿದ್ದೆ. ಆದರೆ ಅವನು ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾಗ ವೈದ್ಯರು ಅಂಗಾಂಗ ದಾನದ ಬಗ್ಗೆ ಚರ್ಚಿಸುತ್ತಿದ್ದಾಗ ಅವನು ಹೇಳುತ್ತಿದ್ದ ಮಾತು ನೆನಪಿಗೆ ಬಂತು. ನನ್ನ ಪುತ್ರನ ಸಾವಿನಲ್ಲಿ ದುಃಖದ ಜೊತೆಗೆ ಹೆಮ್ಮೆಯಿದೆ ಎನ್ನುತ್ತಾರೆ ಸೂರ್ಯನ ತಾಯಿ ಅಲಮೇಲಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com