ಕನ್ನಯ್ಯ ಕುಮಾರ್ ಗೌರವ ಸಲ್ಲಿಸಿದ್ದ ಮೂರ್ತಿಯನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿದ ಎಬಿವಿಪಿ ಕಾರ್ಯಕರ್ತರು

ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೂ ಹಾರ ಹಾಕಿ ಗೌರವ ಸಲ್ಲಿಸಿದ್ದ ಖ್ಯಾತ...
ಕನ್ನಯ್ಯ ಕುಮಾರ್
ಕನ್ನಯ್ಯ ಕುಮಾರ್
Updated on

ಪಾಟ್ನಾ: ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್  ಹೂ ಹಾರ ಹಾಕಿ ಗೌರವ ಸಲ್ಲಿಸಿದ್ದ ಖ್ಯಾತ ಕವಿ ದಿನಕರ್ ಅವರ ಮೂರ್ತಿಗೆ ಎಬಿವಿಪಿ ಮತ್ತು ಬಜರಂಗ ದಳದ ಕಾರ್ಯಕರ್ತರು ಬಿಹಾರದ ಬೆಗುಸರೈ ಜಿಲ್ಲೆಯಲ್ಲಿ ಗಂಗಾಜಲದಿಂದ ಸ್ವಚ್ಛಗೊಳಿಸಿದ ಘಟನೆ ನಡೆದಿದೆ.

ಮೂರ್ತಿ ಸ್ವಚ್ಛಗೊಳಿಸಿದ್ದು ಮಾತ್ರವಲ್ಲದೆ ಎಬಿವಿಪಿ ಕಾರ್ಯಕರ್ತರು ಹವನ ಪೂಜೆಯನ್ನು ಮಾಡಿಸಿ ಕನ್ನಯ್ಯ ಕುಮಾರ್ ಮೊನ್ನೆ ಗುರುವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸ್ಥಳದಲ್ಲಿ ಗಂಗಾಜಲವನ್ನು ಪ್ರೋಕ್ಷಿಸಿದ್ದಾರೆ.

ದೇಶದ್ರೋಹದ ಆರೋಪ ಎದುರಿಸುತ್ತಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಇಲ್ಲಿ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಇಷ್ಟೆಲ್ಲಾ ಆದರೂ ಕೂಡ, ಬಹಳ ಸಮಯಗಳ ನಂತರ ಬಿಹಾರದ ಬೆಗುಸರೈಯಲ್ಲಿ ಹಬ್ಬದ ವಾತಾವರಣ ನಿನ್ನೆ ನೆಲೆ ಮಾಡಿತ್ತು. ದೇಶದ್ರೋಹದ ಆರೋಪದ ಮೇಲೆ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದ ನಂತರ ಮೊದಲ ಬಾರಿಗೆ ಕನ್ನಯ್ಯ ಕುಮಾರ್ ತನ್ನ ತವರೂರಿಗೆ ಭೇಟಿ ನೀಡಿದ್ದನು. ಕನ್ನಯ್ಯನ ಭೇಟಿ ಸಂದರ್ಭದಲ್ಲಿ ಆತನ ಪೋಷಕರು, ಕುಟುಂಬಸ್ಥರು, ನೆರೆಹೊರೆಯವರು, ಗ್ರಾಮಸ್ಥರ ಮುಖದಲ್ಲಿ ಹಬ್ಬದ ಸಡಗರ ನೆಲೆಸಿತ್ತು.

''ಇಂದು ನಮಗೆ ಮಾತ್ರವಲ್ಲದೆ, ಇಡೀ ಗ್ರಾಮಕ್ಕೆ ಸಡಗರ, ಸಂಭ್ರಮ. ಬಹಳ ಸಮಯಗಳ ನಂತರ ಕನ್ನಯ್ಯ ಬಂದಿದ್ದಾನೆ ಎಂದು ಆತನ ತಂದೆ ಜೈಶಂಕರ್ ಸಿಂಗ್ ಹೇಳಿದರು. ಸುಮಾರು 60 ವರ್ಷ ವಯಸ್ಸಿನ ಅವರೀಗ ಪಾರ್ಶ್ವವಾಯು ಪೀಡಿತರಾಗಿದ್ದಾರೆ.
ನಾನು ನನ್ನ ಮಗನಿಗೆ ಕೆಲವು ವಿಶೇಷ ತಿಂಡಿ-ತಿನಿಸುಗಳನ್ನು ಮಾಡುತ್ತೇನೆ ಎಂದರು ಕನ್ನಯ್ಯ ತಾಯಿ ಮೀನಾ. ಅವರು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಂಸತ್ತು ಮೇಲಿನ ದಾಳಿ ರೂವಾರಿ ಅಫ್ಜಲ್ ಗುರುವಿಗೆ ಮರಣದಂಡನೆ ನೀಡಿದ್ದನ್ನು ವಿರೋಧಿಸಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಪಟ್ಟಂತೆ ಕನ್ನಯ್ಯ ಕುಮಾರ್ ನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಮಾರ್ಚ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com