ಹೈದರಾಬಾದ್: ತೆಲಂಗಾಣ ರಾಜ್ಯ ರಚನೆಯಾಗಿ ವರ್ಷಗಳೇ ಕಳೆದರೂ ನೂತನ ರಾಜ್ಯ ರಚನೆ ವಿಚಾರದ ಗೊಂದಲ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ನೂತನ ಜಿಲ್ಲೆಗಾಗಿ ಆಗ್ರಹಿಸಿ ಶುಕ್ರವಾರ ವರಂಗಲ್ ನಲ್ಲಿ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದೆ.
ನೂತನ ಜನಗಾಮ ಜಿಲ್ಲೆ ರಚನೆಗಾಗಿ ಆಗ್ರಹಿಸಿ ಜಿಲ್ಲಾ ಸಾಧನ ಸಮಿತಿ ಕರೆ ನೀಡಿದ್ದ ಪ್ರತಿಭಟನೆಗೆ ಪ್ರತಿಪಕ್ಷಗಳು ಸಾಥ್ ನೀಡಿದ ಪರಿಣಾಮ ಪ್ರತಿಭಟನೆ ಗಂಭೀರ ಸ್ವರೂಪ ಪಡೆದಿತ್ತು. ವರಂಗಲ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಶಾಸಕರ ಮನೆಯತ್ತ ಪ್ರತಿಭಟನಾಕಾರರು ಮುತ್ತಿಗೆಗೆ ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲೆತ್ನಿಸಿದಾಗ ಪ್ರತಿಭಟನಾಕಾರರು-ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೆಲ ಉದ್ರಿಕ್ತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಬಳಿಕ ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ಆರಂಭಿಸಿದ್ದಾರೆ.
ಈ ವೇಳೆ ನಡೆದ ಹಿಂಸಾಚಾರದಲ್ಲಿ ಒಂದು ಸರ್ಕಾರಿ ಬಸ್ ಗೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಹಿಂಸಾಚಾರದಿಂದಾಗಿ ವರಂಗಲ್-ಹೈದರಾಬಾದ್ ಹೆದ್ದಾರಿ ಕೆಲ ಗಂಟೆಗಳ ಕಾಲ ಸ್ಥಗಿತವಾಗಿತ್ತು. ಬಳಿಕ ಘಟನಾ ಸ್ಥಳಕ್ಕೆ ತುರ್ತು ಪ್ರಹಾರದಳ ಮತ್ತು ಅಶ್ರುವಾಯು ದಳ ಆಗಮಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದ್ದಾರೆ.
Advertisement