ಚೆನ್ನೈ: ಪಕ್ಷಕ್ಕೆ ಅಪಖ್ಯಾತಿ ತಂದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಸಂಸದೆ ಶಶಿಕಲಾ ಪುಷ್ಪ ಅವರನ್ನು ಪಕ್ಷದಿಂದ ಸೋಮವಾರ ವಜಾಗೊಳಿಸಲಾಗಿದೆ.
ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಆರೋಪಿಸಿದ ಶಶಿಕಲಾ, ಪಕ್ಷದ ನಾಯಕಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದು ತಾವು ರಾಜೀನಾಮೆ ನೀಡುವುದೇ ಇಲ್ಲ ಎಂದು ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಕಳೆದ ಶನಿವಾರ ಡಿಎಂಕೆ ಸಂಸದ ತಿರುಚಿ ಎನ್ ಶಿವ ಅವರೊಂದಿಗೆ ಜಗಳ ಮಾಡಿಕೊಂಡ ಹಿನ್ನೆಲೆಯಲ್ಲಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವರದಿಗಳ ಪ್ರಕಾರ, ಎಡಿಎಂಕೆ ಪಕ್ಷ ಮತ್ತು ಮುಖ್ಯಸ್ಥರ ವಿರುದ್ಧ ಕೆಲವೊಂದು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶಶಿಕಲಾ ಕೋಪಗೊಂಡು ಶಿವ ಅವರಿಗೆ ಹೊಡೆದಿದ್ದರು ಎಂದು ಹೇಳಲಾಗಿದೆ.
ಆದರೆ ಸಂದರ್ಶನವೊಂದರಲ್ಲಿ ಶಶಿಕಲಾ ತಮ್ಮ ವಿರುದ್ಧ ಯಾವುದೇ ಅವಹೇಳನಕಾರಿ ಟೀಕೆಗಳನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ. ನಾನು ಸಂಸದ ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ಗೌರವ ತೋರಿಸಿದ್ದು ಆಕೆಗೆ ಸಿಟ್ಟು ತರಿಸಿತ್ತು. ಆಕೆ ನನಗೆ ಹೊಡೆದ ನಂತರ ಕೇಂದ್ರ ಮೀಸಲು ಪಡೆಯ ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಯಾಕೆ ಹಾಗೆ ಮಾಡಿದಿರಿ ಎಂದು ಕೇಳಿದರು ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ದೂರು ದಾಖಲಿಸುತ್ತೀರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ನಾನಾಗಲಿ, ನಮ್ಮ ಪಕ್ಷವಾಗಲಿ ಈ ಪ್ರಕರಣದಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಬಯಸುವುದಿಲ್ಲ. ನಾನು ನನ್ನ ಪಕ್ಷದ ಮುಖ್ಯಸ್ಥರಿಂದ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಟಿರುಚಿ ಎನ್ ಶಿವ ತಿಳಿಸಿದ್ದಾರೆ.