ನವದೆಹಲಿ: ಇಡೀ ದೇಶದಾದ್ಯಂತ ಸಾಕಷ್ಟು ವಿವಾದ ಸೃಷ್ಟಿಸಿದ್ದ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ದೇಶದ್ರೋಹ ಸಂಬಂಧಿತ ವಿಡಿಯೋ ತುಣುಕುಗಳು ಅಧಿಕೃತವಾದದ್ದು ಎಂದು ಸಿಬಿಐ ವಿಧಿವಿಜ್ಞಾನ ಪ್ರಯೋಗಾಲಯ ಖಚಿತಪಡಿಸಿದೆ.
ಜೆಎನ್ ಯು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಭನ್ ಭಟ್ಟಾಚಾರ್ಯ ಮೂವರು ದೇಶ ವಿರೋಧಿ ಘೋಷಣೆ ಕೂಗುತ್ತಿರುವ ದೃಶ್ಯವನ್ನು ಖಾಸಗಿ ವಾಹಿನಿಯೊಂದು ರೆಕಾರ್ಡ್ ಮಾಡಿತ್ತು. ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು ಈ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ ಕ್ಯಾಮೆರಾ, ಮೆಮೊರಿ ಕಾರ್ಡ್, ವಿಡಿಯೋ ತುಣುಕು ಇದ್ದ ಸಿಡಿ ಹಾಗೂ ಮತ್ತಿತರ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದರಂತೆ ವಿಡಿಯೋವನ್ನು ಪರಿಶೀಲಿಸಿರುವ ಸಿಬಿಐ ವಿಧಿವಿಜ್ಞಾನ ಪ್ರಯೋಗಾಲಯವು ದೆಹಲಿ ಪೊಲೀಸರಿಗೆ ವರದಿಯನ್ನು ನೀಡಿದ್ದು, ವರದಿಯಲ್ಲಿ ವಿಡಿಯೋ ತುಣುಕುಗಳು ಅಧಿಕೃತವಾದದ್ದು ಎಂದು ಹೇಳಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೆ.9 ರಂದು ರಾಜಧಾನಿ ದೆಹಲಿಯ ಜೆಎನ್ ಯು ಆವರಣದಲ್ಲಿ ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಜಲ್ ಗುರುವಿಗೆ ಶ್ರದ್ಧಾಂಜಲಿ ಕ್ರಾಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ವೇಳೆ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಭನ್ ಭಟ್ಟಾಚಾರ್ಯ ಮೂವರು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಇದರಂತೆ ಮೂವರ ವಿರುದ್ದ ಪೊಲೀಸರ ದೇಶದ್ರೋಹ ಪ್ರಕರಣವನ್ನೂ ದಾಖಲಿಸಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರೀ ವಿವಾದವನ್ನು ಸೃಷ್ಚಿಸಿತ್ತು.
Advertisement