ಕೋಯಿಕ್ಕೋಡ್: ನೌಕರಿ ಅರಸಿ ಕೇರಳಕ್ಕೆ ವಲಸೆ ಬಂದ ಕಾರ್ಮಿಕನಿಗೆ ಸಿಕ್ಕಿದ್ದು ರು.1 ಕೋಟಿ ಬಂಪರ್ ಬಹುಮಾನ.
ಹೌದು, ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದ ಪಶ್ಚಿಮ ಬಂಗಾಳದ ಮೊಫಿಜುಲ್ ರಹಾನ್ ಶೇಖ್ ಎಂಬ ವಲಸಿಗ ಕಾರ್ಮಿಕ ಕೇರಳ ಲಾಟರಿಯಲ್ಲಿ ಬಂಪರ್ ಬಹುಮಾನ ರು.1 ಕೋಟಿ ಗೆದ್ದಿದ್ದಾನೆ.
ಕೆಲಸ ಹುಡುಕಿಕೊಂಡು ಮಾರ್ಚ್ 4ರಂದು ಈ ವಲಸಿಗ ಕೇರಳಕ್ಕೆ ಬಂದಿದ್ದನು. ಬಂದ ದಿನವೇ ಆತ ರು.50ಕ್ಕೆ ಕಾರುಣ್ಯ ಲಾಟರಿ ಟಿಕೆಟ್ ಖರೀದಿಸಿದ್ದನು. ಆದರೆ, ಅದೃಷ್ಟ ಬೇಗ ಕೈ ಹಿಡಿದಿದೆ. ಮರುದಿನ ನಡೆದ ಲಾಟರಿ ಡ್ರಾದಲ್ಲಿ ವಲಸಿಗ ವಿಜೇತನಾಗಿದ್ದು, ರು.1ಕೋಟಿ ಬಂಪರ್ ಬಹುಮಾನ ಪಡಿದಿದ್ದಾರೆ.
ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ದಾಳಿ ಮಾಡಿ ಲಾಟರಿ ಟಿಕೆಟ್ ಕಸಿದುಕೊಂಡು ಹೋಗಬಹುದು ಎಂದು ಹೆದರಿದ ಈ ವಲಸಿಗ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದಾನೆ.
ಪೊಲೀಸರು ಆತನನ್ನು ಬ್ಯಾಂಕ್ ಗೆ ಕರೆದೊಯ್ದಿದ್ದು, ಖಾತೆ ತೆರೆಸಿದ್ದಾರೆ. ನಂತರ ಖಾತೆಗೆ ಟಿಕೆಟ್ ಸಲ್ಲಿಸಿದ್ದಾರೆ.