ನವದೆಹಲಿ: ''ನನ್ನ ಮಗ ಸಿದ್ಧಾರ್ಥನನ್ನು ಈ ವಿವಾದದಲ್ಲಿ ಎಳೆದು ತರಬೇಡಿ. ನನ್ನ ವ್ಯವಹಾರದ ಜೊತೆ ಆತ ಯಾವುದೇ ಸಂಬಂಧ ಹೊಂದಿಲ್ಲ. ಸುಮ್ಮನೆ ಅವನ ವಿರುದ್ಧ ವೃಥಾ ಆರೋಪ ಹೊರಿಸಬೇಡಿ ಎಂದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.
'' ಸಿದ್ಧಾರ್ಥ ಆರೋಪ, ನಿಂದನೆಗಳನ್ನು ಕೇಳುವ ಅಗತ್ಯವಿಲ್ಲ. ಯಾಕೆಂದರೆ ಅವನು ನನ್ನ ವ್ಯವಹಾರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಿಮಗೆ ಬೈಯಬೇಕೆಂದಿದ್ದರೆ, ನಿಂದಿಸಬೇಕೆಂದಿದ್ದರೆ ನನ್ನನ್ನು ಬೈಯಿರಿ, ಅವನು ಏನೂ ತಪ್ಪು ಮಾಡಿಲ್ಲ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ನಲ್ಲಿ ಮಗನ ಪರ ವಹಿಸಿ ಮಾತನಾಡಿದ್ದಾರೆ.
ಹಣ ವಂಚನೆ ಮತ್ತು ದುರುಪಯೋಗ ಆರೋಪಕ್ಕೆ ಸಂಬಂಧಪಟ್ಟಂತೆ ವಿಜಯ್ ಮಲ್ಯ ದೇಶ ಬಿಟ್ಟು ಹೋದ ನಂತರ ಅವರ ಮಗ ಸಿದ್ಧಾರ್ಥನ ವಿರುದ್ಧ ಟ್ವಿಟ್ಟರ್ ನಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿಮ್ಮ ತಂದೆ ಎಲ್ಲಿದ್ದಾರೆ, ಯಾವ ಸ್ಥಳದಲ್ಲಿದ್ದಾರೆ ಎಂದು ಬಹಿರಂಗಪಡಿಸಿ ಎಂದು ಜನರು ಟ್ವಿಟ್ಟರ್ ನಲ್ಲಿ ಪ್ರಶ್ನೆಗಳ ಮತ್ತು ಬೈಗುಳಗಳ ಸುರಿಮಳೆಯನ್ನೇ ಹರಿಸುತ್ತಿದ್ದರು.
'' ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಿದರೆ ಜನರಿಗೆ ಏನು ಖುಷಿ ಸಿಗುತ್ತದೆ? ಅವರು ಪ್ರಭಾವಶಾಲಿಗಳು, ಡೊಡ್ಡ ಮನುಷ್ಯರು, ಶಕ್ತಿಶಾಲಿಗಳು ಎಂದು ತಿಳಿದುಕೊಂಡಿದ್ದಾರ?'' ಎಂದು ಸಿದ್ಧಾರ್ಥ್ ಈ ಹಿಂದೆ ಟ್ವೀಟ್ ಮಾಡಿದ್ದರು.
ಇದಕ್ಕೆ ಸಿದ್ಧಾರ್ಥ್ ಗೆ ಹಲವರು ಬೆಂಬಲವನ್ನೂ ನೀಡಿದ್ದರು. ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ ಸನ್ ಮತ್ತು ಬಾಲಿವುಡ್ ನ ಖ್ಯಾತ ನಿರ್ದೇಶಕಿ ಫರಾನ್ ಖಾನ್ ಸಿದ್ಧಾರ್ಥ್ ಪರ ವಹಿಸಿ ಮಾತನಾಡಿದ್ದರು.
ಇದಕ್ಕೆ ರಿಟ್ವೀಟ್ ಮಾಡಿದ್ದ ಮಲ್ಯ, ಜನರಿಗೆ ಅರ್ಥವಾಗುವುದಿಲ್ಲ. ಇದರಲ್ಲಿ ನೀನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿಲ್ಲ ಎನ್ನುತ್ತಾರೆ.
ಈ ನಡುವೆ ಹಣ ವಂಚನೆ ಮತ್ತು ದುರುಪಯೋಗ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಬೇಕೆಂದು ಕೇಳಿದ್ದ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯ ಕಳೆದ ಶುಕ್ರವಾರ ಹೊಸ ಸಮ್ಮನ್ಸ್ ಜಾರಿ ಮಾಡಿ ಏಪ್ರಿಲ್ 2ರೊಳಗೆ ಹಾಜರಾಗುವಂತೆ ಹೇಳಿದೆ. ಈ ಹಿಂದೆ ನಿರ್ದೇಶನಾಲಯ ಮಲ್ಯಗೆ ಮಾರ್ಚ್ 18ರೊಳಗೆ ಖುದ್ದಾಗಿ ಹಾಜರಾಗುವಂತೆ ಆದೇಶ ನೀಡಿತ್ತು. ಆದರೆ ಏಪ್ರಿಲ್ ನಲ್ಲಿ ಕೋರ್ಟ್ ಗೆ ಹಾಜರಾಗಲು ಕಾಲಾವಕಾಶ ನೀಡಬೇಕೆಂದು ಮಲ್ಯ ಮನವಿ ಮಾಡಿದ್ದರು.
ಪ್ರಸ್ತುತ ಇಂಗ್ಲೆಂಡಿನಲ್ಲಿರುವ ವಿಜಯ್ ಮಲ್ಯ,ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಆರೋಪದಡಿ ವಿಚಾರಣೆಗೆ ಸಂಬಂಧಪಟ್ಟಂತೆ ಭಾರತಕ್ಕೆ ಬೇಕಾಗಿದ್ದಾರೆ. ಭಾರತೀಯ ಬ್ಯಾಂಕುಗಳು ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರವೇ ಸಾಲ ನೀಡಿದ್ದು, ತಾವು ಕಾನೂನು ಜಾರಿ ಸಂಸ್ಥೆಗಳಿಗೆ ಮೋಸ ಮಾಡಲು ಪ್ರಯತ್ನಿಸುವುದಿಲ್ಲ. ತಾನು ಇಂಗ್ಲೆಂಡಿಗೆ ಖಾಸಗಿ ಭೇಟಿ ನೀಡಿದ್ದೇನೆಯೇ ಹೊರತು ತಲೆಮರೆಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement