ಕೋಲ್ಕತಾ ಫ್ಲೈ ಓವರ್ ಕುಸಿತ ಪ್ರಕರಣ: 5 ಅಧಿಕಾರಿಗಳ ಬಂಧನ

ಉತ್ತರ ಕೋಲ್ಕತಾದಲ್ಲಿ ಗುರುವಾರ ಸಂಭವಿಸಿದ ಫ್ಲೈ ಓವರ್ ಕುಸಿದ ಪ್ರಕರಣಕ್ಕೆ ಸಂಬಂಧಿಸಿ 5 ಅಧಿಕಾರಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ...
ಫ್ಲೈ ಓವರ್ ಕುಸಿದಿರುವ ಸ್ಥಳದಲ್ಲಿ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದು
ಫ್ಲೈ ಓವರ್ ಕುಸಿದಿರುವ ಸ್ಥಳದಲ್ಲಿ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದು

ಕೋಲ್ಕತಾ: ಉತ್ತರ ಕೋಲ್ಕತಾದಲ್ಲಿ ಗುರುವಾರ ಸಂಭವಿಸಿದ ಫ್ಲೈ ಓವರ್ ಕುಸಿದ ಪ್ರಕರಣಕ್ಕೆ ಸಂಬಂಧಿಸಿ 5 ಅಧಿಕಾರಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿರುವ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು, ಫ್ಲೈ ಓವರ್ ನಿರ್ಮಾಣ ಕಾರ್ಯದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಕಂಪನಿಯ ಕೆಲವು ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದರಂತೆ ಮತ್ತೊಬ್ಬರು ಅಧಿಕಾರಿ ಮಾತನಾಡಿದ್ದು, ಘಟನೆ ವೇಳೆ ಗಾಯಗೊಂಡವರ ಪೈಕಿ 7 ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸ್ಥಳದಲ್ಲಿರುವ ಅವಶೇಷಗಳನ್ನು ತೆರವುಗೊಳಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಅವರು, ಗಣೇಶ್ ಟಾಕೀಸ್ ಬಳಿ ತಿರುವು ತೆಗೆದುಕೊಳ್ಳುವ ರಸ್ತೆಯಲ್ಲಿದ್ದ ಕಾಂಕ್ರೀಟ್, ಕಬ್ಬಿಣದ ತೊಲೆಗಳನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ಇಂದಿಗೆ ಸಂಪೂರ್ಣಗೊಳ್ಳಲಿದೆ. ಕಬ್ಬಿಣದ ಕಂಬಗಳು, ಮುರಿದ ಕಾಂಕ್ರಿಟ್ ಗಳನ್ನು ಹಂತ ಹಂತವಾಗಿ ತೆರವು ಗೊಳಿಸಲಾಗುತ್ತದೆ.

ಇನ್ನು ಕೆಕೆ ಟಾಗೋರ್ ರಸ್ತೆಯಲ್ಲಿರುವ ಕಬ್ಬಿಣದ ತೊಲೆಗಳು ಬಿದ್ದಿದ್ದು, ಸಂಪೂರ್ಣವಾಗಿ ಮುರಿದು ಬಿದ್ದಿರುವ ಸೇತುವೆಯನ್ನು ಫ್ಲೈ ಓವರ್ ನಿರ್ಮಾಣ ಕಾರ್ಯದಲ್ಲಿ ಯೋಜನೆ ರೂಪಿಸಿದ್ದ ಇಂಜಿನಿಯರ್ ಗಳ ಸಹಾಯದಿಂದ ನಿಧಾನಗತಿಯಲ್ಲಿ ಕತ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಫ್ಲೈ ಓವರ್ ನಿರ್ಮಾಣವಾಗುತ್ತಿರುವ ಸ್ಥಳ ಬಹಳ ಇಕ್ಕಟ್ಟಾಗ ಪ್ರದೇಶವಾಗಿದ್ದು, ತೆರವು ಕಾರ್ಯಾಚರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಇಲ್ಲಿರುವ ಸಾಕಷ್ಟು ಕಟ್ಟಡಗಳು ಅತ್ಯಂತ ಹಳೆಯದಾಗಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಇನ್ನಾವುದೇ ತೊಂದರೆ ಸಂಭವಿಸದಂತೆ ಹಾನಿಗೊಂಡಿರುವ ಸೇತುವೆ ಭಾಗವನ್ನು ತೆರವುಗೊಳಿಸಬೇಕಿದೆ ಎಂದು ಹೇಳಿದ್ದಾರೆ.

ಉತ್ತರ ಕೊಲ್ಕತ್ತಾದ ಬಾಬಾ ಬಜಾರ್‌ನಲ್ಲಿರುವ ಹಳೆಯ ಗಣೇಶ್ ಟಾಕೀಸ್ (ಗಿರೀಶ್ ಪಾರ್ಕ್) ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಫ್ಲೈಓವರ್ ಕುಸಿದು ಬಿದ್ದಿತ್ತು. ಫ್ಲೈ ಓವರ್ ಕುಸಿದ ಪರಿಣಾಮ ಸೇತುವೆ ಕೆಳಗಿದ್ದ ಹಲವು ಸುಮಾರು 24 ಮಂದಿ ಸಾವನ್ನಪ್ಪಿ, ಹಲವರು ಅವಶೇಷಗಳಿಡಿ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು 90ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದರು. ಇದೀಕ ರಕ್ಷಣಾ ಕಾರ್ಯಾಚರಣೆ ಸಂಪೂರ್ಣಗೊಂಡಿದೆ ಎಂದು ಹೇಳಿರುವ ಅಧಿಕಾರಿಗಳು ಅವಶೇಷಗಳಿಡಿ ಯಾರೂ ಇಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಕೋಲ್ಕತಾ ಪೊಲೀಸರು ಸೇತುವೆ ನಿರ್ಮಾಣ ಕಾರ್ಯದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಹೈದರಾಬಾದ್ ಮೂಲದ ಐವಿಆರ್ ಸಿಎಲ್ ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 304 (ಕೊಲೆ ಪ್ರಮಾಣವಲ್ಲದ ಖಂಡನೀಯ ನರಹತ್ಯೆ), 308 (ಖಂಡನೀಯ ನರಹತ್ಯೆ ಯತ್ನ) ಮತ್ತು 407ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಇದೀಗ ತನಿಖೆ ನಡೆಸಲು ಪಶ್ಚಿಮ ಬಂಗಾಳ ಪೊಲೀಸರ ತಂಡ ಹೈದರಾಬಾದ್ ಗೆ ಭೇಟಿ ನೀಡಿದ್ದು, ಐವಿಆರ್ ಸಿಎಲ್ ಕಂಪನಿಯ ಅಧಿಕಾರಿಗಳನ್ನು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com