ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧದ 2001 ತೆರಿಗೆ ವಂಚನೆ ಪ್ರಕರಣವನ್ನು ಮರು ತನಿಖೆ ಮಾಡಲು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.
ಪ್ರಕರಣ ಸಂಬಂಧ ಈ ಹಿಂದೆ ಬಾಂಬೇ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್, ಪ್ರಕರಣವನ್ನು ಮರು ಪರಿಶೀಲಿಸುವ ಕೇಂದ್ರ ಆದಾಯ ತೆರಿಗೆ ಇಲಾಖೆಯ ಮನವಿಯನ್ನು ಪುರಸ್ಕರಿಸಿದೆ. ಹೀಗಾಗಿ ಪ್ರಕರಣದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಭಾರಿ ಮುಖಭಂಗವಾಗಿದ್ದು, ಮತ್ತೆ ತಮ್ಮ ಹಳೆಯ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಅಲೆಯಬೇಕಿದೆ.
ಅಂದಿನ ಖ್ಯಾತ ಕಿರುತೆರೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕಾಗಿ ಬಿಗ್ ಪಡೆಯುತ್ತಿದ್ದ ಸಂಭಾವನೆ ಸಂಬಂಧ 2001-2002ರ ಅವಧಿಯಲ್ಲಿ ಸರ್ಕಾರಕ್ಕೆ ಅವರು 1.66 ಕೋಟಿ ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ ಅವರು ತೆರಿಗೆ ಪಾವತಿ ಮಾಡದ ಕಾರಣ ಅವರ ವಿರುದ್ಧ ಕೇಂದ್ರ ತೆರಿಗೆ ಇಲಾಖೆ ತೆರಿಗೆ ವಂಚನೆ ಪ್ರಕರಣ ದಾಖಲಿಸಿತ್ತು. ಅಲ್ಲದೆ ಈ ಸಂಬಂಧ ವಿಚಾರಣೆ ನಡೆಸಿದ್ದ ಬಾಂಬೇ ಹೈಕೋರ್ಟ್ 2012 ಜುಲೈ ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಪರ ತೀರ್ಪು ನೀಡುವ ಮೂಲಕ ಅವರಿಗೆ ದೊಡ್ಡ ರಿಲೀಫ್ ನೀಡಿತ್ತು.
ಆದಾಯ ತೆರಿಗೆ ಇಲಾಖೆ ಅಮಿತಾಬ್ ಬಚ್ಚನ್ ಅವರ ಆದಾಯ ಮೌಲ್ಯಮಾಪನ ಮಾಡಬಾರದೆಂದು ಬಾಂಬೇ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು. ಇದರಿಂದ ಕೇಂದ್ರ ಆದಾಯ ತೆರಿಗೆ ಇಲಾಖೆಗೆ ತೀವ್ರ ಹಿನ್ನಡೆಯಾಗಿತ್ತು. ಹೀಗಾಗಿ ಪ್ರಕರಣದ ತೀರ್ಪನ್ನು ಆದಾಯ ತೆರಿಗೆ ಇಲಾಖೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಅದರಂತೆ ಇಂದು ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಅಮಿತಾಬ್ ಬಚ್ಚನ್ ಅವರ ವಿರುದ್ಧ 2001ರ ತೆರಿಗೆ ವಂಚನೆ ಪ್ರಕರಣವನ್ನು ಮರುಪರಿಶೀಲಿಸಲು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡಿದೆ.
Advertisement