

ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಎರಡು ವರ್ಷ ಆಡಳಿತಾವಧಿಯನ್ನು ಪೂರೈಸಿದ ಸಂದರ್ಭದಲ್ಲಿ ದೆಹಲಿಯ ಇಂಡಿಯಾ ಗೇಟ್ ಬಳಿ 5 ಗಂಟೆಗಳ ಮೆಗಾ ಶೋ ಏಕ್ ನಯಿ ಸುಭಹ್ ಎಂಬ ಕಾರ್ಯಕ್ರಮ ಆರಂಭಗೊಂಡಿದೆ. ಕೇಂದ್ರದ ಸಚಿವರು, ಬಾಲಿವುಡ್ ನ ಖ್ಯಾತ ನಟ, ನಟಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕಾರ್ಯಕ್ರಮ ನಡೆಸಿಕೊಡುತ್ತಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಮಾತನಾಡಿ, ಸದೃಢ ಭಾರತ ನಿರ್ಮಾಣದಲ್ಲಿ ಮಹಿಳೆಯರು ಭಾಗಿಯಾಗಬೇಕು. ಯಾವ ಕುಟುಂಬವೂ ಗಂಡು, ಹೆಣ್ಣು ಎಂಬ ಬೇಧಭಾವ ತೋರಿಸಬಾರದು. ಎಲ್ಲಿ ನಾರಿಯರನ್ನು ಗೌರವಿಸಲಾಗುತ್ತದೆ ಅಲ್ಲಿ ದೇವತೆಗಳಿರುತ್ತಾರೆ ಎಂದರು. ಹೆಣ್ಣು ಮಕ್ಕಳ ಪರವಾಗಿರುವ ಕೇಂದ್ರದ ಯೋಜನೆಗಳನ್ನು ಪ್ರಸ್ತಾಪಿಸಿದರು.
ಆರಂಭದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್ ಚಾಲನೆ ನೀಡಿ ಯೋಜನೆ ಬಗ್ಗೆ ಹೆಣ್ಣು ಮಕ್ಕಳ ಜೊತೆ ಸಂವಾದ ನಡೆಸಿದರು.
ಇಂದಿನ ಕಾಲಮಾನದಲ್ಲಿ ಮಹಿಳೆಯರನ್ನು ಪುರುಷರಿಗೆ ಸಮನಾಗಿ ಕಂಡರೆ ಕಲ್ಪನೆ ವಾಸ್ತವಕ್ಕೆ ಬರುತ್ತದೆ. ಕೇಂದ್ರ ಸರ್ಕಾರದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಉದ್ದೇಶ ಮಕ್ಕಳಲ್ಲಿ ಹುಡುಗ, ಹುಡುಗಿಯೆಂದು ಭೇದವಿರಬಾರದು, ಇಬ್ಬರೂ ಕುಟುಂಬದ ಆಸ್ತಿಯೆಂದು ಪರಿಗಣಿಸಿ ಇಬ್ಬರಿಗೂ ಸಮಾನ ಅವಕಾಶ ನೀಡಬೇಕು ಎಂದರು ಅಮಿತಾಬ್ ಬಚ್ಚನ್.
ಮಹಿಳೆಯರ ಆಂತರಿಕ ಶಕ್ತಿಗೆ ಹೋಲಿಸಿದರೆ ಪುರುಷರು ಅವರೊಂದಿಗೆ ಸ್ಪರ್ಧೆಗಿಳಿಯಲು ಸಾಧ್ಯವೇ ಇಲ್ಲ ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು ಎಂಬುದನ್ನು ಬಚ್ಚನ್ ಉಲ್ಲೇಖಿಸಿದರು.
ಬಾಲಕಿಯರೊಂದಿಗೆ ಸಂವಾದ ನಡೆಸಿದ ಅವರ ಬಳಿ ಒಬ್ಬ ಬಾಲಕಿ ನೀವು ಹೇಗೆ ಬಿಗ್ ಬಿ ಆದಿರಿ ಎಂದು ಕೇಳಿದಳು. ಅದಕ್ಕೆ ನೆಲದ ಮೇಲೆ ಕುಳಿತುಕೊಂಡು ಉತ್ತರಿಸಿದ ಅಮಿತಾಬ್ ಬಚ್ಚನ್, ನಾನು ಬಿಗ್ ಬಿ ಅಲ್ಲ, ಅದು ನನಗೆ ಮಾಧ್ಯಮದವರು ನೀಡಿದ್ದಷ್ಟೇ ಎಂದರು.
ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಮಿತಾಬ್ ಬಚ್ಚನ್ ನೆರವೇರಿಸಿಕೊಡುವುದಕ್ಕೆ ವಿರೋಧ ಪಕ್ಷಗಳಿಂದ ಕೇಳಿಬಂದ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಡೀ ಕಾರ್ಯಕ್ರಮದ ಒಂದು ಸಣ್ಣ ಭಾಗ, ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯನ್ನು ಮಾತ್ರ ನಡೆಸಿಕೊಡುತ್ತಿದ್ದೇನೆ. ಏಕೆಂದರೆ ಆ ಅಭಿಯಾನದ ರಾಯಭಾರಿ ನಾನಾಗಿರುವುದರಿಂದ ಎಂದು ಸ್ಪಷ್ಟನೆ ನೀಡಿದರು.
Advertisement