ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಇಂದಿರಾ ಗಾಂಧಿ ವಿವಾನ ನಿಲ್ದಾಣದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ದೆಹಲಿಯಲ್ಲಿ ಮಂಜು ಕವಿದ ವಾತಾರಣವಿದ್ದು, ಹಾರಾಟಕ್ಕೆ ಸಿದ್ಧವಿದ್ದ 27 ವಿಮಾನಗಳ ದಿಕ್ಕನ್ನು ಬದಲಿಸಲಾಗಿದೆ. ಹಾಗೂ ಇನ್ನು ಕೆಲವು ವಿಮಾನಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ತಬ್ಬಿಬ್ಬಾಗಿದ್ದು, ಮಾಹಿತಿ ನೀಡದ ಕಾರಣ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಸಾಕಷ್ಟು ವಿಮಾನಗಳ ದಿಕ್ಕನ್ನು ಬದಲಿಸಲಾಗಿದೆ. ಇನ್ನು ಕೆಲವು ವಿಮಾನಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ನಾವು ಲಂಡನ್ ಗೆ ತೆರಳಬೇಕಿತ್ತು. ಮಧ್ಯಾಹ್ನ 2.30ಕ್ಕೆ ಹೋಗಬೇಕಿದ್ದ ವಿಮಾನದ ಸಮಯವನ್ನು ಸಂಜೆ 4 ಗಂಟೆಗೆ ಬದಲಿಸಲಾಗಿದೆ ಎಂದು ಪ್ರಯಾಣಿಕರಾದ ಸಂಜಯ್ ದುಬೇ ಅವರು ಹೇಳಿದ್ದಾರೆ.
ಇನ್ನು ತಮ್ಮ ಸಂಬಂಧಿಕರು, ಕುಟುಂಬಸ್ಥರು, ಸ್ನೇಹತರು ಬರುವಿಕೆಯನ್ನೇ ಕಾಯುತ್ತಿರುವವರು ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ನಿಲ್ದಾಣಕ್ಕೆ ಬಂದಿದ್ದೆ. ಆದರೆ, ಇದೀಗ ವಿಮಾನದ ಸಮಯ ಬದಲಾಗಿರುವುದಾಗಿ ತಿಳಿಯಿತು. ವಿಮಾನ ಬರಲು ತಡವಾಗುತ್ತದೆ ಎಂದು ಈ ಮೊದಲು ಹೇಳಿದ್ದರು. ಇದೀಗ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳುತ್ತಿದ್ದಾರೆ. ನನ್ನ ಪತ್ನಿ ಟೊರೊಂಟೊದಿಂದ ಬರುತ್ತಿದ್ದಾಳೆ. ಆದರೆ, ವಿಮಾನದ ದಿಕ್ಕನ್ನು ಇದೀಗ ಅಹ್ಮದಾಬಾದ್ ಗೆ ಬದಲಿಸಲಾಗಿದೆ. ಅಧಿಕಾರಿಗಳಿಂದ ನಮಗೆ ಯಾವುದೇ ಮಾಹಿತಿಗಳು ಸ್ಪಷ್ಟವಾಗುತ್ತಿಲ್ಲ ಎಂದು ಗುರ್ಮೀತ್ ಅವರು ಹೇಳಿದ್ದಾರೆ.
Advertisement