ನವದೆಹಲಿ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದಾದ್ರಿ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಖ್ಲಾಕ್ ಕುಟುಂಬ ವಿರುದ್ಧ ಆರೋಪಿ ವಿಶಾಲ್ ತಂದೆ ಪ್ರಕರಣ ದಾಖಲಿಸಲು ನಿರ್ಧಾರಿಸಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ತನಿಖಾ ವರದಿಯಲ್ಲಿ ಅಖ್ಲಾಕ್ ಮನೆಯಲ್ಲಿದ್ದಿದ್ದು ಗೋಮಾಂಸವೇ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ವಿಶಾಲ್ ತಂದೆ ಸಂಜಯ್ ರಾಣಾ ಅವರು ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಾರೆನ್ನಲಾಗಿದೆ.
ಗೋಹತ್ಯೆ ಮಾಡಿರುವುದರ ವಿರುದ್ಧ ಅಖ್ಲಾಕ್ ಕುಟುಂಬದ ವಿರುದ್ಧ ನಾವು ಪ್ರಕರಣ ದಾಖಲಿಸುತ್ತೇವೆ. ಗೋಮಾಂಸ ಸೇವನೆ ಮಾಡಿದ ಅಖ್ಲಾಕ್ ಕುಟುಂಬದ ವಿರುದ್ಧ ನ್ಯಾಯಾಲಯ ಕ್ರಮ ಕೈ ಗೊಳ್ಳಬೇಕೆಂದು ಸಂಜಯ್ ರಾಣಾ ಅವರು ಹೇಳಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ತಮ್ಮ ಮಗನ ಇರುವಿಕೆ ಪ್ರಶ್ನೆ ಕುರಿತಂತೆ ಮಾತನಾಡಿರುವ ಅವರು, ನನ್ನ ಮಗ ವಿಶಾಲ್ ತಪ್ಪಿತಸ್ಥನೋ, ಅಲ್ಲವೋ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ. ಅಖ್ಲಾಕ್ ಕೊಲೆಯನ್ನು ನಾವು ಖಂಡಿಸುತ್ತೇವೆ. ಆದರೆ, ಗೋಮಾಂಸ ತಿಂದು ಜನರ ನಂಬಿಕೆಗೆ ನೋವುಂಟು ಮಾಡಿರುವ ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆಂದು ಹೇಳಿದ್ದಾರೆ.
Advertisement