ಮಂಗಳೂರು: 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಭರ್ಜರಿ ವ್ಯಾಪಾರ ಮಾಡಿದ್ದ ಆಭರಣದ ಅಂಗಡಿಗಳಿಗೆ ತೆರಿಗೆ ಇಲಾಖೆ ಅಧಿಕಾರಿಗಳು ಭಾರಿ ಶಾಕ್ ನೀಡಿದ್ದು, ಆಭರಣ ಖರೀದಿಸಿದ ಗ್ರಾಹಕರ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ.
ನೋಟುಗಳ ಮೇಲೆ ನಿಷೇಧ ಹೇರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಆಭರಣದ ಅಂಗಡಿಗಳಿಗೆ ಮುಗಿಬಿದ್ದಿದ್ದ ಭಾರಿ ಕುಳಗಳು ತಮ್ಮ ಬಳಿ ಇದ್ದ ಭಾರಿ ಪ್ರಮಾಣದ ಹಣದಲ್ಲಿ ಆಭರಣಗಳನ್ನು ಖರೀದಿಸಿದ್ದವು. ಆ ಮೂಲಕ ತಾವು ಬಚ್ಚಿಟ್ಟಿದ್ದ ಹಣದಿಂದ ಚಿನ್ನ ಖರೀದಿ ಮಾಡಿ ಸೇಫ್ ಆಗುವ ಪ್ರಯತ್ನ ಮಾಡಿದ್ದವು. ಅಲ್ಲದೆ ಮಂಗಳೂರಿನ ಪ್ರಮುಖ ಆಭರಣದ ಅಂಗಡಿಗಳೂ ಕೂಡ ಅಂದು ರಾತ್ರಿ ಇಡೀ ಭರ್ಜರಿ ವ್ಯಾಪಾರ ಮಾಡಿದ್ದವು. ಕೇವಲ ಮಂಗಳೂರು ಮಾತ್ರವಲ್ಲದೇ ದೇಶದ ಎಲ್ಲ ಪ್ರಮುಖ ಮೆಟ್ರೋ ನಗರಗಳಲ್ಲಿರುವ ಎಲ್ಲ ಆಭರಣದ ಅಂಗಡಿಗಳಿಗೂ ಅಧಿಕಾರಿಗಳು ಇಂತಹುದೇ ನೋಟಿಸ್ ಗಳನ್ನು ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಮಂಗಳೂರಿನಲ್ಲಿ ಅಕ್ಷರಶಃ ಅಕ್ಷಯ ತೃತೀಯ ದಿನವನ್ನು ನೆನಪಸಿಸುವಂತೆ ಗ್ರಾಹಕರು ಆಭರಣದ ಅಂಗಡಿಗಳಿಗೆ ಧಾವಿಸಿದ್ದರು. ತಾವು ಇಚ್ಛೆ ಪಟ್ಟ ಸಾಕಷ್ಟು ಆಭರಣಗಳನ್ನು ಖರೀದಿಸಿದ್ದರು. ಪ್ರತಿದಿನ 8 ಗಂಟೆಗೆ ಬಾಗಿಲು ಹಾಕುತ್ತಿದ್ದ ಆಭರಣ ಅಂಗಡಿಗಳು ನವೆಂಬರ್ 8ರಂದು ತಡರಾತ್ರಿ 2 ಗಂಟೆಯವರೆಗೂ ಹೌಸ್ಫುಲ್ ವ್ಯಾಪಾರ ನಡೆಸಿದ್ದವು. ವ್ಯಾಪಾರಕ್ಕೆ ಬಂದವರೆಲ್ಲಾ ನಿಷೇಧವಾಗಿರುವ 500 ಮತ್ತು 1000 ರುಯಗಳ ನೋಟುಗಳ ಕಂತೆಯನ್ನು ಸುರಿದು ಚಿನ್ನದ ಆಭರಣಗಳನ್ನು ಕೊಂಡೊಯ್ದಿದ್ದರು. ಆದರೀಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಎಲ್ಲ ಗ್ರಾಹಕರ ಹೆಗಲೇರಿದ್ದು, ಆಭರಣ ಖರೀದಿ ಹಿಂದಿನ ಹಣದ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಮಂಗಳೂರಿನ ಆಭರಣದ ಅಂಗಡಿಗಳಿಗೆ ಗ್ರಾಹಕರ ದಾಖಲೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಮುಖವಾಗಿ ಅಂದು 5 ಲಕ್ಷಕ್ಕೂ ಅಧಿಕ ವ್ಯಾಪಾರ ನಡೆಸಿದ ಗ್ರಾಹಕರ ವಿವರ ನೀಡುವಂತೆ ಅಧಿಕಾರಿಗಳು ನೋಟಿಸ್ ನಲ್ಲಿ ಕೇಳಿದ್ದಾರೆ ಎಂದು ತಿಳಿದುಬಂದಿದೆ. ನವೆಂಬರ್ 8ರಂದು ಪ್ರಧಾನಿ ಮೋದಿ ನೋಟುಗಳ ಮೇಲಿನ ನಿಷೇಧ ಘೋಷಿಸಿದ ಬಳಿಕ ನಡೆಸಲಾದ ವಹಿವಾಟುಗಳ ಕುರಿತ ಎಲ್ಲಾ ದಾಖಲೆ ಒದಗಿಸುವಂತೆ ಮಂಗಳೂರಿನ ಆಭರಣ ಮಳಿಗೆಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಅಂದು ಚಿನ್ನ ಖರೀದಿಸಿದ ಗ್ರಾಹಕರ ವಿವರ ಮತ್ತು ವಹಿವಾಟಿನ ಸಂಪೂರ್ಣ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಎಲ್ಲ ಅಂಗಡಿಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅದರ ಆಧಾರದ ಮೇಲೆ ಗ್ರಾಹಕರ ವಿವರ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Advertisement