ಸೀಮಿತ ದಾಳಿ ಕುರಿತಂತೆ ಬಡಾಯಿ ಕೊಚ್ಚಿಕೊಳ್ಳಬೇಡಿ: ಬಿಜೆಪಿ ನಾಯಕರಿಗೆ ಮೋದಿ
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿ ಸೀಮಿತ ದಾಳಿ ವಿಚಾರದಲ್ಲಿ ನಾಯಕರು ಬಡಾಯಿಕೊಚ್ಚಿಕೊಳ್ಳಬಾರದು ಹಾಗೂ ಉನ್ಮಾದ ಸೃಷ್ಟಿಸಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ನಾಯಕರಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೀಮಿತ ದಾಳಿ ಕುರಿತಂತೆ ಸುಖಾಸುಮ್ಮನೆ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ಬಾಯಿಗೆ ಬೀಗ ಹಾಕಿದ್ದಾರೆ. ಸೀಮಿತ ದಾಳಿ ಬಗ್ಗೆ ಯಾವುದೇ ನಾಯಕರು ಬಡಾಯಿಕೊಚ್ಚಿಕೊಳ್ಳಬಾರದು. ದಾಳಿ ಕುರಿತಂತೆ ಮಾತನಾಡಲು ಕೆಲ ಅಧಿಕಾರಿಗಳಿಗೆ ಮಾತ್ರ ಅಧಿಕಾರವನ್ನು ನೀಡಲಾಗಿದೆ.
ಹೀಗಾಗಿ ಆಯಾ ಅಧಿಕಾರಿಗಳು ಮಾತ್ರ ಸೀಮಿತ ದಾಳಿ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡಬಹುದು. ಇತರರು ಅನಗತ್ಯವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಭಾರತೀಯ ಸೇನೆ ಯಾವುದೇ ರೀತಿಯ ಸೀಮಿತ ದಾಳಿಯನ್ನು ನಡೆಸಿಲ್ಲ. ಸುಮ್ಮನೆ ಇಲ್ಲಸಲ್ಲದ ತಪ್ಪು ಮಾಹಿತಿಗಳನ್ನು ವಿಶ್ವಕ್ಕೆ ನೀಡುತ್ತಿದೆ ಎಂದು ಹೇಳುವ ಮೂಲಕ ಪಾಕಿಸ್ತಾನ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿದೆ. ಇತ್ತ ಪಾಕಿಸ್ತಾನದೊಂದಿಗೆ ಹೆಜ್ಜೆ ಹಾಕುತ್ತಿರುವಂತೆ ಇಲ್ಲಿನ ಕೆಲ ನಾಯಕರು ವರ್ತಿಸುತ್ತಿದ್ದು, ಸೇನೆಯ ಸೀಮಿತ ದಾಳಿ ನಡೆಸಿದ್ದೇ ಆದರೆ, ಸಾಕ್ಷ್ಯಾಧಾರ ಒದಗಿಸಲಿ ಎಂದು ಆಗ್ರಹಿಸುತ್ತಿವೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸೇನಾಧಿಕಾರಿಗಳು ಬಹಿರಂಗಪಡಿಸುವುದು, ಬಿಡುವುದು ನಿಮ್ಮ ಕೈಯಲ್ಲಿದೆ ಎಂದು ಪರೋಕ್ಷವಾಗಿ ಹೇಳುತ್ತಿರುವಂತೆ ನಿನ್ನೆಯಷ್ಟೇ ಸೀಮಿತ ದಾಳಿ ಕುರಿತ ವಿಡಿಯೋವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರ ಬಹಿರಂಗ ವಿಚಾರವನ್ನು ಗಂಭೀರವಾಗಿ ಆಲೋಚಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ತಮ್ಮ ನಾಯಕರ ಬಾಯಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇದರಂತೆ ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಸುಖಾಸುಮ್ಮನೆ ಹೇಳಿಗೆ ನೀಡುವುದು ಹಾಗೂ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ