ಜಯಲಲಿತಾ ಆರೋಗ್ಯದಲ್ಲಿ ಶೀಘ್ರ ಚೇತರಿಕೆ: ರಾಹುಲ್ ಗಾಂಧಿ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲ್ಲಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲ್ಲಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ತೀವ್ರ ಬಳಲಿಕೆ, ಜ್ವರ ಮತ್ತು ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವ ಜಯಲಲಿತಾ ಅವರನ್ನು ದಾಖಲು ಮಾಡಲಾಗಿರುವ ಚೆನ್ನೈನ ಅಪೋಲೋ ಆಸ್ಪತ್ರೆಗೆ ಕಾಂಗ್ರೆಸ್  ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಭೇಟಿ ನೀಡಿದ್ದರು. ರಾಹುಲ್ ಗಾಂಧಿ ಅವರಿಗೆ ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್ ತಿರುಣಾವುಕ್ಕರಸರ್ ಅವರು ಸಾಥ್ ನೀಡಿದ್ದರು.

ಈ ವೇಳೆ ಎಐಎಡಿಎಂಕೆ ಮುಖಂಡರು ರಾಹುಲ್ ಗಾಂಧಿ ಅವರಿಗೆ ಜಯಲಲಿತಾ ಅವರ ಆರೋಗ್ಯ ಕುರಿತ ವಿವರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ವಿಚಾರಣೆಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈಗಷ್ಟೇ  ಅವರನ್ನು ನೋಡಿದ್ದು, ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವ ಜಯಲಲಿತಾ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಸೆಪ್ಟೆಂಬರ್ 22ರಂದು ಜ್ವರ, ತೀವ್ರ ಬಳಲಿಕೆ ಹಾಗೂ ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದ ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯಾ  ಆರೋಗ್ಯ ಕುರಿತ ತಮಿಳುನಾಡು ರಾಜ್ಯದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಇತ್ತೀಚೆಗೆ ಮತ್ತೆ ಸ್ಪಷ್ಟನೆ ನೀಡಿದ್ದ ಅಪೋಲೋ ಆಸ್ಪತ್ರೆ ವೈದ್ಯರು ಜಯಾ ಅವರ ಚಿಕಿತ್ಸೆ  ಮತ್ತಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂದು ಹೇಳಿದ್ದರು.

"ಜಯಾ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿದ್ದು, ಶ್ವಾಸಕೋಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದರಿಂದ ಔಷಧಿಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಆ್ಯಂಟಿ  ಬಯಾಟಿಕ್ ಗಳನ್ನು ಮುಂದುವರೆಸಲಾಗುತ್ತಿದ್ದು, ದೇಹಕ್ಕೆ ಶಕ್ತಿ ನೀಡಬಲ್ಲ ಪೋಷಕಾಂಶಗಳನ್ನು ಔಷಧಿ ಮೂಲಕ ನೀಡಲಾಗುತ್ತಿದೆ. ಸಕ್ಕರೆ ಖಾಯಿಲೆ ಹಾಗೂ ಬ್ರಾಂಕೈಟಿಸ್ ನಿಂದ ಜಯಾ  ಬಳಲುತ್ತಿದ್ದು, ಅದಕ್ಕೂ ನಿಗದಿತ ಪ್ರಮಾಣದಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಇತ್ತೀಚೆಗಷ್ಟೇ ಜಯಾ ಅವರ ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಲಂಡನ್ ಮೂಲದ ಖ್ಯಾತ ವೈದ್ಯ ರಿಚರ್ಡ್ ಜಾನ್ ಬೀಲೆ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಾಗಿತ್ತು. ಗುರುವಾರ ಮತ್ತೆ ಆಸ್ಪತ್ರೆಗೆ  ಭೇಟಿ ನೀಡಿದ್ದ ಬೀಲೆ ಅವರು ಜಯಾ ಅವರನ್ನು ಪರೀಕ್ಷಿಸಿದ್ದರು. ಅಂತೆಯೇ ಕೆಲ ಚಿಕಿತ್ಸೆ ಮತ್ತು ಔಷಧಿಗಳನ್ನು ಮುಂದುವರೆಸುವಂತೆ ಸೂಚಿಸಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com