ಮುಂಬೈ: ಸೀಮಿತ ದಾಳಿ ಕುರಿತಂತೆ ರಾಜಕೀಯ ಕೆಸರೆರಚಾಟ ಆರಂಭಿಸಿರುವ ವಿರೋಧ ಪಕ್ಷದ ನಾಯಕರ ಬಾಯಿಮುಚ್ಚಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಸೀಮಿತ ದಾಳಿಯ ಯಶಸ್ಸಿನ ಕೀರ್ತಿಯೇದ್ದರೂ ಭಾರತೀಯ ಸೇನೆಗೆ ಸಲ್ಲಬೇಕಿದೆ ಎಂದು ಬುಧವಾರ ಹೇಳಿದ್ದಾರೆ.
ಮುಂಬೈ ನಲ್ಲಿ ನಡೆದ ಎಂಇಟಿ 2016ರ ಸಮಾವೇಶದಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿಯ ಯಶಸ್ಸಿನ ಫಲವೇನಿದ್ದರೂ ಭಾರತೀಯ ಸೇನೆಗೆ ಸಲ್ಲಬೇಕಿದೆ ಮತ್ತು ಸೀಮಿತ ದಾಳಿಯ ನಿರ್ಧಾರ ತೆಗೆದುಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಸಲ್ಲಬೇಕಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕ ಪ್ರಧಾನಿ ಮೋದಿಯವರ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ಪ್ರತಿಪಕ್ಷಗಳು ಸಾಕಷ್ಟು ಬೆಂಬಲಗಳನ್ನು ವ್ಯಕ್ತಪಡಿಸಿದ್ದವು. ನಂತರ ನಿಧಾನಗತಿಯಲ್ಲಿ ಸೀಮಿತ ದಾಳಿ ಕುರಿತಂತೆ ಒಬ್ಬೊಬ್ಬ ನಾಯಕರಿಂದಲೇ ರಾಜಕೀಯ ಕೆಸರೆರಚಾಟ ಆರಂಭವಾಯಿತು.
ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಆರಂಭವಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಜನರ ಗಮನ ಸೆಳೆಯಲು ಭಾರತೀಯ ಸೇನೆಯನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಇನ್ನೂ ಕೆಲ ನಾಯಕರು ಸೇನೆಯ ದಾಳಿ ಕುರಿತಂತೆ ಸಾಕ್ಷ್ಯಾಧಾರ ಒದಗಿಸುವಂತೆಯೂ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಪರಿಕ್ಕರ್ ಅವರು ಹೇಳಿಕೆ ನೀಡಿದ್ದು, ಸೀಮಿತ ದಾಳಿಯ ಯಶಸ್ಸು ಏನಿದ್ದರೂ ಭಾರತೀಯ ಸೇನೆಗೆ ಸಲ್ಲಬೇಕೆನ್ನುವ ಮೂಲಕ ಪ್ರತಿಪಕ್ಷಗಳ ನಾಯಕರ ಬಾಯಿಯನ್ನು ಮುಚ್ಚಿಸಿದ್ದಾರೆ.
Advertisement
Advertisement