ಭಯೋತ್ಪಾದನೆ ವಿರುದ್ಧ ಪಾಕ್ ಹೋರಾಟದ ಕುರಿತು ಶಂಕೆ: ರಾಜ್ ನಾಥ ಸಿಂಗ್
ಚಂಡೀಘಢ: ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆಂದು ಹೇಳುತ್ತಿರುವ ಪಾಕಿಸ್ತಾನದ ಮೇಲೆ ನಮಗೆ ಶಂಕೆಯಿಂದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಪ್ರಾದೇಶಿಕ ಸಂಪಾದಕರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ವಿರುದ್ಧ ನಿಜವಾಗಲೂ ಪಾಕಿಸ್ತಾನ ಹೋರಾಡಲು ಮುಂದಾಗಿದ್ದೇ ಆದರೆ, ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತ ಸಿದ್ಧವಿದೆ. ಆದರೆ, ಪಾಕಿಸ್ತಾನ ನಿಜಕ್ಕೂ ಭಯೋತ್ಪಾದನೆ ವಿರುದ್ಧ ಹೋರಾಡಲಿದೆಯೇ ಎಂಬುದರ ಬಗ್ಗೆ ಭಾರತಕ್ಕೆ ಅನುಮಾನಗಳಿವೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಇರುವ ವ್ಯತ್ಯಾಸಗಳನ್ನು ಪಾಕಿಸ್ತಾನ ಮರೆತುಹೋಗಿದೆ. ಭಾರತದಲ್ಲಿ ನಡೆಯುತ್ತಿರುವ ಬಹುತೇಕ ವಿಧ್ವಂಸಕ ಕೃತ್ಯಗಳು ಪಾಕಿಸ್ತಾನ ಮೂಲದ ಉಗ್ರರಿಂದಲೇ ಆಗುತ್ತಿದೆ. ಪಾಕಿಸ್ತಾನ ನಿಜಕ್ಕೂ ಭಯೋತ್ಪಾದನೆಯನ್ನು ಮಟ್ಟ ಹಾಕಲು ಮುಂದಾಗಿದ್ದೇ ಆದರೆ, ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡುವ ಉದ್ದೇಶವನ್ನು ಪಾಕಿಸ್ತಾನ ಹೊಂದಿದೆಯೇ ಎಂಬುದರ ಬಗ್ಗೆ ನಮಗೆ ಸಂಶಯವಿದೆ.
ಸೈಬರ್ ಅಪರಾಧಗಳು ಕೂಡ ಇತ್ತೀಚಿನ ದಿನಗಳಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಸೈಬರ್ ಅಪರಾಧಗಳನ್ನು ಮಟ್ಟಹಾಕಲು ಎಲ್ಲಾ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ಮಂಡಳಿ ಈ ಬಗ್ಗೆ ಕೆಲಸ ಮಾಡುತ್ತಿದೆ.
2008ರ ಮುಂಬೈ ದಾಳಿ ಬಳಿಕ ಭಾರತದ ಕರಾವಳಿ ತೀರ ಪ್ರದೇಶಗಳ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದಿಗಿಂತಲೂ ನಮ್ಮ ಭದ್ರತಾ ಸಂಸ್ಥೆಗಳು ಸಾಕಷ್ಟು ಸಿದ್ಧತೆಗಳನ್ನು ನಡೆಸಿವೆ. ಬಾಂಗ್ಲಾದೇಶ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಈಶಾನ್ಯ ಪ್ರದೇಶ ಹಾಗೂ ಅಂತರಾಷ್ಟ್ರೀಯ ಗಡಿಗಳಲ್ಲಿ ಹೆಚ್ಚಿನ ಕಣ್ಗಾವಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ