ಪಾಕ್'ನಿಂದ ಪದೇಪದೇ ಕದನ ವಿರಾಮ ಉಲ್ಲಂಘನೆ: ಮತ್ತೊಬ್ಬ ಯೋಧ ಹುತಾತ್ಮ

ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಆರ್.ಎಸ್. ಪುರ ಸೆಕ್ಟರ್ ಬಳಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮನಾಗಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಆರ್.ಎಸ್. ಪುರ ಸೆಕ್ಟರ್ ಬಳಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮನಾಗಿರುವ ಘಟನೆ ಗುರುವಾರ ನಡೆದಿದೆ.

ಹುತಾತ್ಮ ಯೋಧನನ್ನು ಬಿಹಾರ ಮೂಲದ ಜಿತೇಂದರ್ ಕುಮಾರ್ ಎಂದು ಗುರ್ತಿಸಲಾಗಿದೆ. ಇಂದು ಬೆಳಿಗ್ಗೆ ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಜಿತೇಂದರ್ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ಸೇನಾ ಮೂಲಗಳು ಮಾಹಿತಿ ನೀಡಿದೆ.

ಕಳೆದ ರಾತ್ರಿ 8.35ರ ಸುಮಾರಿಗೆ ಆರ್. ಪುರ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. 9 ಗಂಟೆಗೆ ಶೆಲ್ ಗಳ ಮೂಲಕ ದಾಳಿ ನಡೆಸಲು ಪ್ರಾರಂಭಿಸಿತು. ಶೆಲ್ ದಾಳಿಗೆ ಬಿಎಸ್ಎಫ್ ಯೋಧರ 14 ಕೇಂದ್ರಗಳು ನಾಶಗೊಂಡಿವೆ. ಇಂದು ಬೆಳಿಗ್ಗೆ 6.15 ರವರೆಗೂ ದಾಳಿ ನಡೆಯುತ್ತಲೇ ಇತ್ತು. ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಗಡಿ ಭದ್ರತಾ ಪಡೆ ಉಪ ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೇಂದ್ರ ಪರಿಖ್ ಅವರು ಹೇಳಿದ್ದಾರೆ.

ಇಂದು ಬೆಳಿಗ್ಗೆ ನಡೆದ ಅಪ್ರಚೋದಿತ ಗುಂಡಿನ ದಾಳಿಗೆ 6 ನಾಗರೀಕರಿಗೆ ಗಾಯವಾಗಿದ್ದು, ಗಾಯಗೊಂಡವರನ್ನು ಜ್ಯೋತಿ ಶರ್ಮಾ (39), ರಾಜ್ ರಾಣಿ (40), ಲಕ್ಕಿ ಶರ್ಮಾ (20), ಅಭಿ ಶರ್ಮಾ (18), ಉದಯ್ ಶರ್ಮಾ (10) ಮತ್ತು ಶಾನೋ ದೇವ್ (55) ಎಂದು ಗುರ್ತಿಸಲಾಗಿದೆ.

ಗಾಯಗೊಂಡ ಎಲ್ಲಾ 6 ನಾಗರೀಕರು ಆರ್.ಎಸ್ ಪುರದ ಗೋಪಾರ್ ಬಸ್ತಿ ಪ್ರದೇಶದ ಜನರಾಗಿದ್ದು, ಎಲ್ಲರನ್ನೂ  ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com